ವಿದ್ಯಾರ್ಥಿ ಯುವಜನರ ಹಕ್ಕುಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ- ಹೆಚ್ ಎ ವೆಂಕಟೇಶ್

ಮೈಸೂರು,ಜುಲೈ,22,2026 (www.justkannada.in): ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ವಿದ್ಯಾರ್ಥಿ ಯುವಜನರ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಹರಿಹಾಯ್ದಿದ್ದಾರೆ.

ಮಾಧ್ಯಮ ಪ್ರಕಟಣೆ ಮೂಲಕ ಕೇಂದ್ರದ ವಿರುದ್ದ ಗುಡುಗಿರುವ ಹೆಚ್ ಎ ವೆಂಕಟೇಶ್, ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸದೆ ಪ್ರಧಾನಮಂತ್ರಿ ಸಂಸತ್ತಿನಿಂದ ಪಲಾಯನ ಮಾಡುತ್ತಿದ್ದಾರೆ. ಜನತೆಯ ಪ್ರತಿಭಟನೆ, ನ್ಯಾಯಯುತ ಸಭೆ ನಡೆಸುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಜೆಗಳು ,  ದೇಶದ ಸಂವಿಧಾನದ ಆರ್ಟಿಕಲ್ 32ರಲ್ಲಿ  ತಮಗೆ ದತ್ತವಾಗಿರುವ ಅಧಿಕಾರದನ್ವಯ  ರಿಟ್ ಅರ್ಜಿಗಳನ್ನು ದಾಖಲಿಸಿ, ಕೇಂದ್ರ ಸರ್ಕಾರದ ಏಕಸ್ವಾಮ್ಯ ಹಾಗೂ ಹಕ್ಕುಗಳ ಹರಣ ನೀತಿಯನ್ನು ಪ್ರಶ್ನಿಸುವ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.

ನೀಟ್ ಹಗರಣ, ಓಟ್ ಚೋರಿ;  ಚಂದಾ  ಚೋರಿ ಸೇರಿದಂತೆ ಹತ್ತಾರು  ಹಗರಣಗಳಲ್ಲಿ ಮುಳುಗಿರುವ ಅನೈತಿಕ ನಡವಳಿಕೆಯ ಈ ಬಿಜೆಪಿ ಸರ್ಕಾರ,  ಸಂಪೂರ್ಣ   ಸರ್ವಾಧಿಕಾರಿ ಧೋರಣೆ ತಳೆದಿದೆ.

ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನೇ ವಶಕ್ಕೆ ಪಡೆದು ಜನರ ದನಿ ಉಡುಗಿಸುವ ಪ್ರಯತ್ನ ನಡೆಸುತ್ತಿದೆ. ಇದು ಬಹಳ ಸ್ಪಷ್ಟವಾಗಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು  ಸಂವಿಧಾನದ ಆರ್ಟಿಕಲ್ 19 (1)(ಬಿ) ಅನ್ವಯ ನೀಡಿರುವ ಶಾಂತಿಯುತ ಪ್ರತಿಭಟನೆ, ಸಭೆ ನಡೆಸುವ ಹಕ್ಕು  ಹಾಗೂ;  ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೆಚ್ ಎ ವೆಂಕಟೇಶ್ ಕಿಡಿಕಾರಿದ್ದಾರೆ.

ನೀಟ್ ಪೇಪರ್ ಸೋರಿಕೆ ಒಂದು ವ್ಯವಸ್ಥಿತ ಷಡ್ಯಂತ್ರ. ಇದರಿಂದಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹೊಣೆಹೊತ್ತು ರಾಜೀನಾಮೆ ನೀಡಬೇಕಿದ್ದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನವರನ್ನು ಪ್ರಧಾನಿ ನರೇಂದ್ರ ಮೋದಿ ನಾಚಿಕೆ ಬಿಟ್ಟು  ರಕ್ಷಿಸಿಕೊಳ್ಳುತ್ತಿರುವುದು ದುರಂತ.

ಪ್ರಜೆಗಳ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿ ದೇಶದ  ಸರ್ವೋನ್ನತ ಸಾಂವಿಧಾನಿಕ ಸಂಸ್ಥೆಯಾಗಿರುವ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕು. ಜೊತೆಗೆ ರಾಷ್ಟ್ರಪತಿಯವರು ಸಹ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ ಜನತೆಯ ಹಕ್ಕುಗಳ ರಕ್ಷಣೆಗೆ ಕಾವಲಾಗಬೇಕಾದ ಅನಿವಾರ್ಯತೆ ಇದೆ. ದೇಶದ ಯಾವುದೇ ಪ್ರಜೆ ತನ್ನ ಹಕ್ಕಿನ ರಕ್ಷಣೆಗಾಗಿ ಆರ್ಟಿಕಲ್ 32ರನ್ವಯ ಸರ್ವೋಚ್ಚ ನ್ಯಾಯಾಲಯವನ್ನು ನೇರವಾಗಿ ಸಂಪರ್ಕಿಸಬಹುದಾದ ಅಧಿಕಾರವನ್ನು ಬಾಬಾ ಸಾಹೇಬರು ನೀಡಿದ್ದಾರೆ. ಸಂವಿಧಾನದ ಹೃದಯ ಮತ್ತು ಆತ್ಮ ಎಂದು ಪರಿಗಣಿಸಲ್ಪಡುವ ಈ ಆರ್ಟಿಕಲ್ 32ರ ಮೂಲಕ ದೇಶದ ಪ್ರಜೆಗಳು ಭಾರೀ ಸಂಖ್ಯೆಯಲ್ಲಿ ನ್ಯಾಯಾಂಗದ ಕದ ತಟ್ಟಿ ತಮ್ಮ ಹಕ್ಕುಗಳನ್ನು  ಉಳಿಸಿಕೊಳ್ಳಬೇಕಿದೆ ಎಂದು ಹೆಚ್ ಎ ವೆಂಕಟೇಶ್ ತಿಳಿಸಿದ್ದಾರೆ.

Key words: Modi government, students, rights, H.A. Venkatesh