ಬೆಳವಣಿಗೆಯ ಪುನರುಜ್ಜೀವನ, ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಸಮತೋಲಿತ ಬಜೆಟ್- ಎಫ್‍ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ.

ಬೆಂಗಳೂರು,ಫೆಬ್ರವರಿ,16,2024(www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ  ತಮ್ಮ 15ನೇ ರಾಜ್ಯ ಬಜೆಟ್ ಮಂಡಿಸಿದ್ದಕ್ಕಾಗಿ ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ   ರಮೇಶ್ ಚಂದ್ರ ಲಹೋಟಿ ಅವರು ಅಭಿನಂದಿಸಿದರು. ಈ ಅವಧಿಯಲ್ಲಿ ಬೆಳವಣಿಗೆಯ ಪುನರುಜ್ಜೀವನ ಮತ್ತು ಅಭಿವೃದ್ಧಿಗೆ ಒತ್ತು ನೀಡುವ 2024-25 ಪರಿಪೂರ್ಣ ಬಜೆಟ್ ಇದಾಗಿದೆ ಎಂದು ಬಣ್ಣಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ  ಎಫ್.ಕೆ.ಸಿ.ಸಿ.ಐ. ಅಧ್ಯಕ್ಷ   ರಮೇಶ್ ಚಂದ್ರ ಲಹೋಟಿ, ಎಫ್‍ ಕೆಸಿಸಿಐನ ಶಿಫಾರಸ್ಸುಗಳಲ್ಲಿ ಒಂದಾದ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ  ಬೆಂಗಳೂರು – ಮುಂಬೈ ಆರ್ಥಿಕ ಕಾರಿಡಾರ್ ಕಾರ್ಯಕ್ರಮದಡಿ ಧಾರವಾಡ ಬಳಿ ಕೈಗಾರಿಕಾ ನೋಡ್ (Industrial node)  ಅನ್ನು ಅಭಿವೃದ್ಧಿಪಡಿಸುವ ಮೂಲಕ ಬೆಂಗಳೂರಿನ ಹೊರಗೆ ಕೈಗಾರಿಕಾ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಎಫ್‍ಕೆಸಿಸಿಐಯು ಸ್ವಾಗತಿಸುತ್ತದೆ. ಇದರಿಂದ ಉತ್ತರ ಕರ್ನಾಟಕದಲ್ಲಿ ಉದ್ಯೋಗವನ್ನು ಸೃಷ್ಟಿಸುವುದಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ.

ಇದಲ್ಲದೆ ಕಲಬುರಗಿಯಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆ ಮತ್ತು ಕಿತ್ತೂರು- ಕಲ್ಯಾಣ ಕರ್ನಾಟಕ   ಕರ್ನಾಟಕ ಮತ್ತು ಮೈಸೂರು ವಲಯದಲ್ಲಿ ಹೊಸ ಜವಳಿ ಪಾರ್ಕ್ ನಿರ್ಮಾಣವನ್ನು ಸ್ವಾಗತಿಸುತ್ತೇವೆ.

ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರಗಿ, ತುಮಕೂರು, ಕೋಲಾರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸಮಗ್ರ ಟೌನ್ ಶಿಪ್ ಅಭಿವೃದ್ಧಿಯ ಪ್ರಸ್ತಾಪವನ್ನು ಕರ್ನಾಟಕದ 2 – 3 ಹಂತದ ನಗರಗಳ ಬೆಳವಣಿಗೆಗೆ ಆದ್ಯತೆಯನ್ನು ನೀಡಿರುವುದಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುವುದಾಗಿ ರಮೇಶ್ ಚಂದ್ರ ಲಹೋಟಿ ತಿಳಿಸಿದ್ದಾರೆ.

ಎಪಿಎಂಸಿಯ ಡಿಜಿಟಲೀಕರಣಕ್ಕಾಗಿ 10 ಕೋಟಿ ರೂ.ಗಳನ್ನು ನಿಗದಿಪಡಿಸುವ ಮೂಲಕ ಕೃಷಿ ಕ್ಷೇತ್ರಕ್ಕೆ ವಿಶೇಷವಾಗಿ ಎಪಿಎಂಸಿಗೆ ಒತ್ತು ನೀಡಿರುವುದು ಸ್ವಾಗತಾರ್ಹ.  ಏಕೆಂದರೆ ಇದು ಎಪಿಎಂಸಿಯಲ್ಲಿ ರೈತರೊಂದಿಗೆ ವ್ಯಾಪಾರಿ ಸಮುದಾಯದ ಕಾರ್ಯಚರಣೆಯನ್ನು ಸುಗಮಗೊಳಿಸುತ್ತದೆ. ಮತ್ತು ಹಳೆಯ ಎಪಿಎಂಸಿ ಕಾಯ್ದೆಯನ್ನು ಮರು ಜಾರಿಗೆ ತರಲು ತಿಳಿಸಿದ್ದಕ್ಕಾಗಿ ರಮೇಶ್ ಚಂದ್ರ ಲಹೋಟಿ  ಹರ್ಷ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿಗಳಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಒಣ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ,                 ಬಯೋ – ಸಿಎನ್‍ಜಿ ಘಟಕ ಸ್ಥಾಪನೆ ಮತ್ತು ಇವಿ ಚಾರ್ಜಿಂಗ್ ಕೇಂದ್ರಗಳು ಮತ್ತು ಪೆಟ್ರೋಲ್ ಬಂಕ್‍ಗಳ ಸ್ಥಾಪನೆ ಎಪಿಎಂಸಿ ಅಭಿವೃದ್ಧಿಗೆ ಮೌಲ್ಯವನ್ನು ಹೆಚ್ಚಿಸುತ್ತದೆ.

ಕರ್ನಾಟಕದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ಎಫ್‍ಕೆಸಿಸಿಐ ಮಾಡಿದ ಶಿಫಾರಸುಗಳನ್ನು ಪರಿಗಣಿಸಲಾಗಿದ್ದು, ಮೂಲಸೌಯರ್ಕ ಸೌಲಭ್ಯಗಳೊಂದಿಗೆ 10 ಪ್ರಮುಖ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಮತ್ತು ಅಂಜನಾದ್ರಿ ಬೆಟ್ಟ ಐತಿಹಾಸಿಕ ಮತ್ತು ಪೌರಾಣಿಕ ಕ್ಷೇತ್ರಗಳಿಗೆ ಮುಂದಾಗಿರುವುದು ಶ್ಲಾಘನೀಯ.  ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂಬ ಹೊಸ ಪರಿಕಲ್ಪನೆಯಡಿ ಪೆರಿಫೆರಲ್ ರಿಂಗ್ ರಸ್ತೆಯನ್ನು ಅಭಿವೃದ್ಧಿಪಡಿಸುವ ಮೂಲಕ ಮೂಲಕ ಬೆಂಗಳೂರು ನಗರದ ಅಭಿವೃದ್ಧಿಗೆ ಒತ್ತು ನೀಡಿರುವುದನ್ನು ಎಫ್‍ಕೆಸಿಸಿಐ ಸ್ವಾಗತಿಸುತ್ತದೆ ಎಂದಿದ್ದಾರೆ.

44 ಕಿ.ಮೀ ಉದ್ದದ ಹೊಸ ಮೆಟ್ರೋ ಮಾರ್ಗವನ್ನು, ಬಿಐಇಸಿಯಿಂದ ತುಮಕೂರು ಮತ್ತು ದೇವನಹಳ್ಳಿಯಿಂದ ಕೆಐಎಎಲ್ ವರೆಗೆ ಮೆಟ್ರೋವನ್ನು ವಿಸ್ತರಿಸುವುದು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸರಾಗಗೊಳಿಸುವಲ್ಲಿ ಬಹಳ ಅನುಕೂಲವಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆಯಬೇಕಾದ ವಿವಿಧ ಸಮ್ಮತಿ ಮತ್ತು ಅನುಮತಿಗಳಿಗಾಗಿ ಸರಳೀಕೃತ ಕಾರ್ಯ ವಿಧಾನಗಳನ್ನು ಪರಿಚಯಿಸತ್ತಿರುವುದು ಕೈಗಾರಿಕೆಗಳಿಗೆ ಉತ್ತೇಜನಾ ನೀಡಿದಂತಾಗುತ್ತದೆ.

ಇಂಧನ ವಲಯಕ್ಕೆ ಸಂಬಂಧಿಸಿದಂತೆ, ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು 23,159 ಕೋಟಿ ರೂ.ಗಳನ್ನು ಒದಗಿಸಿದ್ದಾರೆ.  ಇದು ಒಟ್ಟು ಹಂಚಿಕೆಯ 6% ರಷ್ಟಿದೆ. ಆದಾಗ್ಯೂ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು 29,500 ಕೋಟಿ ರೂ.ಗಳ ಅಗತ್ಯವನ್ನು ಸೂಚಿಸಿತ್ತು. ದೇಶೀಯ ಪೂರೈಕೆದಾರರಿಗೆ ಉಚಿತ ಪೂರೈಕೆಗೆ ಸಂಬಂಧಿಸಿದಂತೆ, ಎಸ್ಕಾಂಗೆ ಸರಿದೂಗಿಸಬೇಕಾದ ಮೊತ್ತವು ಕರ್ನಾಟಕ ಸರ್ಕಾರವು ಒದಗಿಸುವ ನಿರೀಕ್ಷೆಯ ಬಳಕೆಯ ಮೇಲೆ ಅವಲಂಬಿತವಾಗಿರುತ್ತದೆ.

ಕೊನೆಯದಾಗಿ, ರಾಜ್ಯದಲ್ಲಿ ಹೆಚ್ಚಿನ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು 2025 ರ ಫೆಬ್ರವರಿಯಲ್ಲಿ ಉದ್ದೇಶಿತ ಜಾಗತಿಕ ಬಂಡವಾಳ ಹೂಡಿಕೆ ಸಭೆಯನ್ನು ಎಫ್‍ಕೆಸಿಸಿಐ ಸ್ವಾಗತಿಸುತ್ತದೆ ಎಂದು  ರಮೇಶ್ ಚಂದ್ರ ಲಹೋಟಿ ತಿಳಿಸಿದ್ದಾರೆ.

Key words: growth-balanced- budget – FKCCI President- Ramesh Chandra Lahoti