ಮೈಸೂರು ಅರಮನೆ ಪ್ರವೇಶಿಸಿದ ದಸರಾ ಗಜಪಡೆಗೆ ಜಿಲ್ಲಾಡಳಿತದಿಂದ ಅದ್ಧೂರಿ ಸ್ವಾಗತ…

ಮೈಸೂರು,ಆ,26,2019(www.justkannda.in): ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೋಳ್ಳಲು ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಗೆ ಅರಮನೆಯಲ್ಲಿ ಜಿಲ್ಲಾಡಳಿತ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

ಇಂದು ಅರಣ್ಯಭವನದಿಂದ ಹೆಜ್ಜೆ ಹಾಕಿ ಮೈಸೂರಿನ ಅರಮನೆಗೆ ಪ್ರವೇಶಿಸಿದ ಮೊದಲ ಹಂತದ 6 ಆನೆಗಳ ಗಜಪಡೆಗೆ ಅರಮನೆ ಜಯಮಾರ್ತಾಂಡ ದ್ವಾರದ ಬಳಿ ವಿಶೇಷ ಪೂಜೆ ಸಲ್ಲಿಸಿ ಸ್ವಾಗತ ಕೋರಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅರಮನೆ ಬಳಿ ಗಜಪಡೆಗೆ ಪೂಜೆ ಸಲ್ಲಿಸಿ ಸ್ವಾಗತ ಕೋರಿದರು. ಈ ವೇಳೆ ಗಣ್ಯರು ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಿದರು.

ಇದಕ್ಕೂ ಮುನ್ನ ಮೈಸೂರು ಅರಣ್ಯ ಭವನದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಪೂಜೆ ಬಳಿಕ ಅರಮನೆಯತ್ತ ಹೊರಟ ಗಜಪಡೆಯನ್ನ ದಸರಾ ಗಜಪಡೆಯ ನೋಡಲು ಸಾರ್ವಜನಿಕರು ಮುಗಿ ಬಿದ್ದ ದೃಶ್ಯ ಕಂಡು ಬಂತು. ಅರಣ್ಯ ಭವನದಿಂದ ಬಳ್ಳಾಲ್ ವೃತ್ತ, ರಾಮಸ್ವಾಮಿ ವೃತ್ತ ಹಾಗೂ ಗನ್ ಹೌಸ್ ವೃತ್ತ ಮೂಲಕ ಸಾಗಿ ಅರಮನೆ ಜಯಮಾರ್ಥಾಂಡದ್ವಾರವನ್ನ ಗಜಪಡೆಯ ಆನೆಗಳು ಸೇರಿದವು. ಗಜಪಡೆಗೆ ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

ಮೈಸೂರು ಅರಣ್ಯ ಭವನಕ್ಕೂ ಬಂತು ಹೈ ಅಲರ್ಟ್

ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಹಿನ್ನೆಲೆ, ಮೈಸೂರು ಅರಣ್ಯ ಭವನಕ್ಕೂ ಬಂತು ಹೈ ಅಲರ್ಟ್ ಮಾಡಲಾಗಿದ್ದು, ದಸರಾ ಆನೆಗಳು ಬಾರಿ ಭದ್ರತೆಯಲ್ಲಿ ಅರಮನೆಯತ್ತ ಸಾಗಿದವು , ಮೈಸೂರು ದಸರಾ ಗಜಪಡೆ ಬಳಿ ಶ್ವಾನ ಹಾಗೂ ಬಾಂಬ್ ಸ್ಕ್ವಾಡ್ ನಿಂದ ಶೋಧ ಕಾರ್ಯ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಭವನದಲ್ಲಿ ಭದ್ರತಾದಳ ಹೈ ಚೆಕ್ಕಿಂಗ್ ಮಾಡಿತು .

ಮೊದಲ ಬಾರಿ ದಸರಾದಲ್ಲಿ ಭಾಗವಹಿಸುತ್ತಿರುವ ಈಶ್ವರ ಆನೆ ಹೆಜ್ಜೆ ಹಾಕಲು ಹಿಂದೇಟು

ಇದೇ ಮೊದಲ ಬಾರಿ ದಸರಾ ಗಜಪಡೆಯಲ್ಲಿ ಭಾಗವಹಿಸಿರುವ ಆನೆ ಈಶ್ವರ ಕೊಂಚ ವಿಚಲಿತನಾದನು. ಪೂಜೆ ಸಲ್ಲಿಕೆ  ವೇಳೆ ಗಾಬರಿಗೊಳಗಾದನು. ಅರಣ್ಯ ಭವನದಲ್ಲಿ ಪೊಜೆ ನಡೆಯುತ್ತಿದ್ದ  ವೇಳೆ ಗಲಿಬಿಲಿಗೊಂಡ ಆನೆಯನ್ನ ಮಾವುತ ನಿಯಂತ್ರಣಕ್ಕೆ ತಂದರು.

ಗಾಬರಿಗೊಂಡ ಈಶ್ವರ ಆನೆ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿದ್ದನು. ಹೀಗಾಗಿ ಈಶ್ವರ ಆನೆ ಸುತ್ತಲು  ಅರಣ್ಯಾಧಿಕಾರಿಗಳು ಹಾಗೂ ನುರಿತ ಪಡೆ ಸುತ್ತುವರೆದಿದ್ದರು.

Key words: Welcome – Dasara gajapde –elephant-Mysore Palace