“ಸಾಮಾಜಿಕ ನ್ಯಾಯದ ಚರ್ಚೆಯು ದುಡಿಯದಿದ್ದವನಿಗೆ ಸಂಭಾವನೆ ನೀಡಿದಂತಾಗಬಾರದು” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

kannada t-shirts

ಮೈಸೂರು,ಫೆಬ್ರವರಿ,20,2021(www.justkannada.in) : ಇಂದು ಎಲ್ಲ ಜಾತಿಗಳು ಸಾಮಾಜಿಕ ನ್ಯಾಯದ ಪಟ್ಟಿಯಲ್ಲಿ ಸೇರಬೇಕೆಂಬ ಪೈಪೋಟಿಯಲ್ಲಿರುವಂತೆ ಗೋಚರಿಸುತ್ತಿದೆ. ಸಾಮಾಜಿಕ ನ್ಯಾಯದ ಚರ್ಚೆಗಳು ಹಸಿದ ಹೊಟ್ಟೆಗೆ ಆಹಾರವನ್ನು ನೀಡುವಂತಾಗಬೇಕು ಹೊರತು ದುಡಿಯದಿದ್ದವನಿಗೆ ಸಂಭಾವನೆ ನೀಡಿದಂತಾಗಬಾರದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದರು.

ಮಾನಸ ಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ಅಂತರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ” ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯ ಇಲ್ಲದ ಕಡೆ ಶಾಂತಿ ನಡೆಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕ ಪ್ರಜ್ಞೆ ಅಗತ್ಯ. ಮಂಡಲ್ ಆಯೋಗದ ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯವು ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಚರ್ಚಿಸಿರುವಂತೆ confined to minority of seats ಎಂಬ ಅವರ ಮಾತುಗಳ ಅನ್ವಯ ಮೀಸಲಾತಿಯನ್ನು ಶೇ.50ರಷ್ಟು ಮೀರಬಾರದೆಂದು ತೀರ್ಪು ನೀಡಿದೆ. ಇದನ್ನು ಎಲ್ಲರೂ ಅರಿಯಬೇಕಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಒಂದು ಭಿಕ್ಷೆಯಲ್ಲ. ಅದೊಂದು ಮಾನವ ಹಕ್ಕು ಎಂಬುದಾಗಿ ಪ್ರತಿಪಾದಿಸಿ ಸಾಮಾಜಿಕ ನ್ಯಾಯದ ನೆಲೆಗೆ ಕಾನೂನು ಚೌಕಟ್ಟನ್ನು ನೀಡಿದ ಮಹಾನಾಯಕರಾಗಿದ್ದಾರೆ ಎಂದು ಸ್ಮರಿಸಿದರು.

ಸಾಮಾಜಿಕ ನ್ಯಾಯವೆಂದರೆ ಕೇವಲ ಮೀಸಲಾತಿಯಲ್ಲ

ಸಾಮಾಜಿಕ ನ್ಯಾಯವೆಂದರೆ, ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ಹಿಂದುಳಿದವರ, ಬಡವರ, ದುರ್ಬಲರ, ತುಳಿತಕ್ಕೆ ಮತ್ತು ಶೋಷಣೆಗೆ ಒಳಪಟ್ಟವರ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಮೇಲೆತ್ತುವುದಾಗಿದೆ. ಮೀಸಲಾತಿಯು ಸಾಮಾಜಿಕ ನ್ಯಾಯದ ಒಂದು ಸಣ್ಣ ಭಾಗವಷ್ಟೇ. ಮೀಸಲಾತಿಯೇ ಸಾಮಾಜಿಕ ನ್ಯಾಯವಲ್ಲ. ಸಾಮಾಜಿಕ ನ್ಯಾಯವೆಂದರೆ ಕೇವಲ ಮೀಸಲಾತಿಯಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಮೀಸಲಾತಿಯು ದಾನ ಅಲ್ಲ

ಮೀಸಲಾತಿಯು ಬಡತನವನ್ನು ನಿರ್ಮೂಲನೆ ಮಾಡುವ ಸರ್ಕಾರದ ಕಾರ್ಯಕ್ರಮ ಅಲ್ಲ. ಅದೊಂದು ದಾನವೂ ಅಲ್ಲ. ಬದಲಾಗಿ ಮೀಸಲಾತಿ ಒಂದು ಮಾನವ ಹಕ್ಕು. ಸಮಾನತೆಯ ಸಾಧನವಾಗಿದೆ.  ನಮ್ಮ ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರಿ ಇಲಾಖೆಗಳಲ್ಲಿ ಮತ್ತು ಸಾಮಾಜಿಕ ವಲಯಗಳಲ್ಲಿ ಮಾತ್ರ ಮೀಸಲಾತಿ ನೀಡಲಾಗುತ್ತಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲ. ದೇಶದ ಒಟ್ಟು ಉದ್ಯೋಗಗಳಲ್ಲಿ ಸರ್ಕಾರಿ –ಸಾರ್ವಜನಿಕ ವಲಯಗಳ ಪಾಲು ತುಂಬಾ ಕಡಿಮೆ ಎಂದು ವಿಷಾದವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 2018ರಲ್ಲಿ ಖಾಲಿಯಿರುವ ಉದ್ಯೋಗಗಳ ಸಂಖ್ಯೆ 2.39 ಲಕ್ಷ

ಸಾರ್ವಜನಿಕ ವಲಯದಲ್ಲಿ ಭರ್ತಿ ಮಾಡದೆ ಖಾಲಿಯಿರುವ ಹುದ್ದೆಗಳು ಸರಿಸುಮಾರು 60ಲಕ್ಷಕ್ಕೂ ಹೆಚ್ಚು ಎಂದು ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಹೇಳಿದ್ದಾರೆ. ಇದರೊಂದಿಗೆ ರಾಜ್ಯ ಸರ್ಕಾರಗಳಲ್ಲಿ ಸರಿಸುಮಾರು ಅಷ್ಟೇ ಉದ್ಯೋಗಗಳು ಖಾಲಿ ಇವೆ. ಕರ್ನಾಟಕದಲ್ಲಿ 2018ರಲ್ಲಿ ಖಾಲಿಯಿರುವ ಉದ್ಯೋಗಗಳ ಸಂಖ್ಯೆ 2.39 ಲಕ್ಷವಾಗಿದೆ ಎಂದು ವಿವರಿಸಿದರು.

ಇದೇ ಪರಿಸ್ಥಿತಿ ಇತರೆ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡದಿದ್ದರೆ ಸಾಮಾಜಿಕ ನ್ಯಾಯವನ್ನು ಅಪ್ರಸ್ತುತಗೊಳಿಸಿದಂತಾಗುತ್ತದೆ. 1991ರಿಂದ ಉದಾರವಾದ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡ ಬಳಿಕ ಸಾರ್ವಜನಿಕ ವಲಯದ ವ್ಯಾಪ್ತಿ ಸೀಮಿತಗೊಂಡಿದೆ. ಸಾರ್ವಜನಿಕ ವಲಯದಲ್ಲಿದ್ದ ಅನೇಕ ಉದ್ದಿಮೆಗಳು ಖಾಸಗಿ ಉದ್ದಿಮೆಗಳಾಗಿದ್ದು, ಕೆಲವನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದರು.

ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಮೂಲ ಸ್ವರೂಪವಾದ ಸಾಮಾಜಿಕ ಹಿಂದುಳಿಯುವಿಎಕೆ ಮತ್ತು ಶೈಕ್ಷಣೀಕ ಹಿಂದುಳಿಯುವಿಕೆಯ ನೆಲೆಗಳನ್ನು ಮೀರಿ ಆರ್ಥಿಕ ಹಿಂದುಳಿಯುವಿಕೆಯ ಚರ್ಚೆಗಳು ಘರ್ಜಿಸಿದಂತಾಗಿದೆ. ಸಂವಿಧಾನಿಕ ಆಶಯ ಹಾಗೂ ಸಾಮಾಜಿಕ ನ್ಯಾಯದ ಹರಿಕಾರರು ಪ್ರತಿಪಾದಿಸಿದೆ. ಸಾಮಾಜಿಕ ನ್ಯಾಯದ ಚರ್ಚೆಗಳು ದಿಕ್ಕುತಪ್ಪುತ್ತಿರುವ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳು ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ, ನಮ್ಮ ದೇಶದಲ್ಲಿ ಸಂಪನ್ಮೂಲವಿದೆ. ಈ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಎಲ್ಲರ ಅಭಿವೃದ್ಧಿಗೆ ಅವಕಾಶ ನೀಡಬೇಕಿದೆ ಎಂದರು.

ಸ್ವಾತಂತ್ರ್ಯ ನಂತರ ಎಲ್ಲರಿಗೂ ಅವಕಾಶಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದೇವೆ. ಸಂವಿಧಾನದ ಆಶಯಗಳಿಂದಾಗಿ ಒಂದಿಷ್ಟು ಸುಧಾರಣೆಯಾಗಿದೆ. ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು. ಎಲ್ಲರನ್ನೂ ಒಳಗೊಂಡಂತಹ ಅಭಿವೃದ್ಧಿ ಅಗತ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಉಚ್ಚ ನ್ಯಾಯಾಲಯ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ಡಿ.ದೇವರಾಜ ಅರಸು ಪೀಠ ಅಭಿವೃದ್ಧಿ ಅಧ್ಯಯನ ಸಂಸ್ಥೆ ಸಂದರ್ಶಕ ಪ್ರಾಧ್ಯಾಪಕ ಕೆ.ಎಸ್‌‌.ಲಿಂಗಪ್ಪ ಇತರರು ಉಪಸ್ಥಿತರಿದ್ದರು.

ENGLISH SUMMARY…

‘Social justice discussions shouldn’t lead a non-worker get returns’: UoM VC
Mysuru, Feb. 20, 2021 (www.justkannada.in): “It appears all the castes are fighting to enter in the list of social justice. Social justice discussions should provide food for the hungry, it shouldn’t make a non-worker get the benefit,” opined Prof. G. Hemanth Kumar, Vice-Chancellor, University of Mysore.
He inaugurated a special lecture programme on the occasion of ‘International Social Justice Day’, organized by Dr. B.R. Ambedkar Research and Extension Centre and Development Research Institute, held at the Vishwagnani Auditorium in Manasagantori campus today.
“There can’t be peace where there is no justice. Citizen awareness is required for social justice. The Hon’ble Supreme Court in the Mandal Commission Judgement has said that the reservation should not exceed 50% as per ‘Confined to Minority of Seats’, as proposed by Dr. B.R. Ambedkar in the Constitution meeting. Everyone should understand this,” he explained.
“Dr. B.R. Ambedkar was a person who provided a legal frame for social justice by propagating that social justice is not alms, it is a human right,” he added.
High Court Senior advocate Prof. Ravivarma Kumar, D. Devraj Urs Bench Development Research Institute Visiting Professor K.S. Lingappa were present on the occasion.Social,justice,Discussion,not work,Remuneration,Should,not,given,Chancellor,Prof.G.Hemant Kumar
Keywords: Prof. G. Hemant Kumar/ University of Mysore/ social justice/ ‘International Social Justice Day

key words : Social-justice-Discussion-not work-Remuneration-Should-not-given-Chancellor-Prof.G.Hemant Kumar

website developers in mysore