ಬಿಜೆಪಿಗೆ ಜನರು ಬಡಿಗೆ ತೆಗೆದುಕೊಂಡು ಹೊಡಿತಾರೆಂಬ ಹೇಳಿಕೆ ವಿಚಾರ: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ…

ಮೈಸೂರು,ಫೆ,21,2020(www.justkannada.in): ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೇ ಬಿಜೆಪಿಗೆ ಜನರು ಬಡಿಗೆ ತೆಗೆದುಕೊಂಡು ಹೊಡಿತಾರೆ ಎಂದು ಹೇಳಿಕೆ ನೀಡಿದ್ದ ಸಿದ್ಧರಾಮಯ್ಯಗೆ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ. ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯನವರು 5ವರ್ಷ ಆಡಳಿತ ಮಾಡಿದ್ರು.ಕುಮಾರಸ್ವಾಮಿ ಒಂದೂವರೆ ವರ್ಷ ಆಡಳಿತ ಮಾಡಿದ್ರು. ನಿಮ್ಮ ಆಡಳಿತದಲ್ಲಿ ನೀವು ಏನ್ ಮಾಡಿದ್ರಿ? ಯಡಿಯೂರಪ್ಪ 6 ತಿಂಗಳಾಯ್ತು ಅಧಿಕಾರಕ್ಕೆ ಬಂದು. ಒಮ್ಮೆ ಅವರು ಮಾಡಿದ ಕೆಲಸ ಮೆಲುಕು ಹಾಕಿದ್ರೆ. ಜನರು ಯಾರಿಗೆ ಬಡಿಗೆ ತೆಗೆದುಕೊಂಡು ಹೊಡಿತಾರೆ ಗೊತ್ತಾಗುತ್ತೆ  ಇನ್ನಾರು ತಿಂಗಳಲ್ಲಿ ನಮ್ಮ ಆಡಳಿತ ಹೇಗಿರಲಿ ಎಂದು ಅವರಿಗೆ ಗೊತ್ತಾಗುತ್ತೆ. 6 ತಿಂಗಳಲ್ಲಿ ಸಿದ್ದರಾಮಯ್ಯನವರ ಬಣ್ಣ ಬಯಲು ಮಾಡ್ತಿನಿ ಎಂದು ಟಾಂಗ್ ನೀಡಿದರು.

ಈ ಬಾರಿ ಬಜೆಟ್ ರೈತರ ಹಾಗೂ ಕೃಷಿಗೆ ಆದ್ಯತೆಯ ಬಜೆಟ್…

ರಾಜ್ಯ ಬಜೆಟ್ ಸಿದ್ಧತೆ ಬಗ್ಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಈ ಬಾರಿ ಬಜೆಟ್ ರೈತರ ಹಾಗೂ ಕೃಷಿಗೆ ಆದ್ಯತೆಯ ಬಜೆಟ್ ಆಗಲಿದೆ. ರೈತರಿಗೆ ಹೆಚ್ಚಿನ ಆದ್ಯತೆ ಕೊಡುತ್ತೇವೆ.‌ ನೆರೆ ಸಂತ್ರಸ್ತರಿಗೆ ನಾವು ಎಲ್ಲ ಸಹಾಯ ಮಾಡಿದ್ದೇವೆ. ಚಿಕ್ಕ ಪುಟ್ಟ ಲೋಪವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾದಲ್ಲಿ ಎಷ್ಟು ಖೋತಾ ಆಗಿದೆ ಎಂಬುದು ಲೆಕ್ಕ ಹಾಕುತ್ತಿದ್ದೇವೆ. ಅದನ್ನೆಲ್ಲ ಸರಿದೂಗಿಸಿ ಬಜೆಟ್ ಮಾಡುತ್ತೇವೆ ಎಂದರು.

ಮಾರ್ಚ್ 5 ಬಜೆಟ್ ಮಂಡನೆ ಮಾಡುತ್ತಿದ್ದೇವೆ. ಈಗಾಗಲೇ ಅದರ ಬಗ್ಗೆ ಸಿದ್ದತೆ ನಡೆದಿದೆ. 3 ನೇ ತಾರೀಖಿನ ಒಳಗೆ ಅದಕ್ಕೊಂದು ರೂಪ ಕೊಡುವ ಪ್ರಯತ್ನ ಆಗಲಿದೆ. ಬಹಳಾ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಳಸಾ ಬಂಡೂರಿ ಯೋಜನೆ   ಸಮಸ್ಯೆ ಬಗೆ ಹರಿದಿರೋದು ಸಂತಸ ತಂದಿದೆ. ಅದಕ್ಕೆ ಈ ಬಜೆಟ್ ನಲ್ಲಿ ಹಣ ತೆಗೆದಿಟ್ಟು ಆದಷ್ಟು ಬೇಗ ನೀರಾವರಿ ಯೋಜನೆ ಚಾಲನೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಸಾಕಷ್ಟು ನಡೆದಿದೆ. ಸರ್ಕಾರ ರಚನೆಯಾಗಿ 7 ತಿಂಗಳಾಗಿದೆ. ರಾಜ್ಯದ ಜನರಿಗೆ ನಮ್ಮ ಅಭಿವೃದ್ಧಿ ಕಾರ್ಯಕ್ರಮ ತಿಳಿಯಲು ಇನ್ನು 5-6ತಿಂಗಳು ಬೇಕಾಗಲಿದೆ. ಇನ್ನು 6 ತಿಂಗಳಲ್ಲಿ ಜನ ಮೆಚ್ಚುವ ಅಭಿವೃದ್ಧಿ ಕಾರ್ಯ ಮಾಡುವ ವಿಶ್ವಾಸ ಇದೆ. ನೆರೆ ಸಂತ್ರಸ್ತರಿಗೆ ಏನೇನು ಮಾಡಬೇಕೋ ನಮ್ಮ ಶಕ್ತಿಮೀರಿ ಮಾಡಿದ್ದೇವೆ ಅಲ್ಲಿ ಇಲ್ಲಿ ಕೊರತೆ ಅಗಿದ್ರೆ ಅದನ್ನ ಸರಿಪಡಿಸಲಾಗುತ್ತೆ ಎಂದರು.

Key words: people-beat-BJP- Siddaramaiah –statement- CM BS Yeddyurappa-tong