ಸುಯೇಜ್ ಫಾರ್ಮ್ ಮತ್ತು ಕೆ.ಎಸ್.ಐ.ಸಿ.ನಿಗಮದ ಕಾರ್ಖಾನೆಗೆ ಭೇಟಿ ,ಪರಿಶೀಲನೆ: ಬಡವರಿಗೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಕುರಿತು ಸಚಿವ ವಿ.ಸೋಮಣ್ಣ ಏನಂದ್ರು ಗೊತ್ತೆ …

ಮೈಸೂರು,ನ,2,2019(www.justkannada.in):   ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ನಗರದ ಸುಯೇಜ್ ಫಾರ್ಮ್ ಮತ್ತು ಕೆ.ಎಸ್.ಐ.ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಯೇಜ್ ಫಾರ್ಮ್ ಸಮಸ್ಯೆ ಹೆಚ್ಚಾದ ಹಿನ್ನಲೆ ಮೈಸೂರಿನ ಜೆ.ಪಿ.ನಗರದಲ್ಲಿರುವ ಸುಯೇಜ್ ಫಾರ್ಮ್ ಗೆ  ಸಚಿವ ವಿ,ಸೋಮಣ್ಣ ಭೇಟಿ ನೀಡಿದರು.  ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಮೇಯರ್ ಪುಷ್ಪಲತಾ ಸಹ  ಸುಯೇಜ್ ಫಾರ್ಮ್ ಪರಿವೀಕ್ಷಣೆ ಮಾಡಿದರು.

ಸುಯೇಜ್ ಫಾರ್ಮ್ ಕಸದ ಸಮಸ್ಯೆ ಬಗೆಹರಿಸಲು ಮೇಯರ್ ಹಾಗೂ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು ಆದ್ರೆ  ಸ್ಥಳೀಯ ಶಾಸಕ ಎಸ್.ಎ ರಾಮದಾಸ್ ಅವರೇ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಎಸ್.ಎ ರಾಮದಾಸ್ ಅವರು ಹಲವಾರು ವರ್ಷಗಳಿಂದ ಸುಯೇಜ್ ಫಾರ್ಮ್ ಸಮಸ್ಯೆ ಹೋರಾಟ ಮಾಡಿದ್ದರು.

ಕಸದ ಸಮಸ್ಯೆ ಕುರಿತು ಸಚಿವ ವಿ.ಸೋಮಣ್ಣಗೆ ನಿವಾಸಿಗಳು ಹಾಗೂ ಶಾಲಾ ಮಕ್ಕಳು ದೂರು ನೀಡಿದರು.  ಸುಯೇಜ್ ಫಾರ್ಮ್ ಕಸದ ಸಮಸ್ಯೆಯಿಂದ ಬದುಕು ನಡೆಸುವುದು ಅಸಾಧ್ಯವಾಗಿದೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.

ಜೆಪಿ ನಗರ ನಿವಾಸಿಗಳಿಂದ ದೂರು ಸ್ವೀಕರಿಸಿದ ಸಚಿವ ವಿ. ಸೋಮಣ್ಣ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಾಳೆಯಿಂದಲೇ ಕೆಲಸ ಆರಂಭಿಸಲು ಜಿಲ್ಲಾಧಿಕಾರಿಗೆ ಸೋಮಣ್ಣ ಆದೇಶ ನೀಡಿದರು.

ಕೆ.ಎಸ್.ಐ.ಸಿ. ನಿಗಮದ ಕಾರ್ಖಾನೆಗೆ ಭೇಟಿ: ಮ್ಯಾನೇಜರ್ ಗೆ ಕ್ಲಾಸ್….

ಮೈಸೂರಿನ ಹೆಚ್.ಡಿ ಕೋಟೆ ರಸ್ತೆಯ ವಿದ್ಯಾರಣ್ಯಪುರಂನಲ್ಲಿರುವ ಕೆ.ಎಸ್.ಐ.ಸಿ. ನಿಗಮದ ಕಾರ್ಖಾನೆಗೆ ಭೇಟಿ ನೀಡಿದ ರೇಷ್ಮೆ ಸಚಿವ ವಿ.ಸೋಮಣ್ಣ.ಅಧಿಕಾರಿಗಳೊಂದಿಗೆ ವಿವಿಧ ಘಟಕಗಳಲ್ಲಿ ಪರಿಶೀಲನೆ ನಡೆಸಿದರು. ಅಭಿವೃದ್ಧಿಗೆ ಹೆಚ್ಚಿನ  ಒತ್ತು ಕೊಡಬೇಕು. ರೇಷ್ಮೆ ಸೀರೆಗಳನ್ನು ಮಾರುಕಟ್ಟೆಗೆ ಹೆಚ್ಚು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೆಯೇ ಮಧ್ಯಮ ವರ್ಗಗಳಿಗೆ ಕೈಗೆಟುಕುವ ದರದಲ್ಲಿ ರೇಷ್ಮೆ ಸೀರೆಗಳನ್ನ ನೀಡುವ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಇದೇ ವೇಳೆ ಕೆಎಸ್ಐಸಿ ಜನರಲ್ ಮ್ಯಾನೇಜರ್ ಕೃಷ್ಣರಿಗೆ  ಕ್ಲಾಸ್ ತೆಗೆದುಕೊಂಡ ಸಚಿವ ಸೋಮಣ್ಣ, ಬಾರೀ ಕಿಲಾಡಿ ಇದ್ದಿಯಾ ನೀನು. ಒಂದು ಹೇಳ್ತಿನಿ ಕೇಳು. ನಾನು ಏನ್ ಮಾಡೋಕೂ ತಯಾರಿದಿನಿ. ನಿನ್ನಾಟ ನನ್ನತ್ರ ನಡೆಯಲ್ಲ. ಸರಿಯಾಗಿ ಕೆಲಸ ಮಾಡು. ನಾನು ರೈತ.  ರೇಷ್ಮೆ ಕೃಷಿ ನಂಗೂ ಗೊತ್ತು. ನೀನು ಕಳ್ಳ ರೈತ. ಹೆಚ್ಚಿನ ಪ್ರೊಡಕ್ಷನ್ ಆಗ್ಬೇಕು. ಉದ್ಯೋಗ ಸೃಷ್ಟಿಯಾಗ್ಬೇಕು ಎಂದು ಸೂಚಿಸಿದರು.

ಹಂಗಾಮಿ ನೌಕರರನ್ನ ಖಾಯಂಗೊಳಿಸುವ ವಿಚಾರ ಸಂಬಂಧ ಮುಖ್ಯಮಂತ್ರಿಗಳೊಟ್ಟಿಗೆ ಮಾತುಕತೆ ನಡೆಸಿ ಖಾಯಂ ನೌಕರರನ್ನಾಗಿಸೋಣ. ವೇತನ ಹೆಚ್ಚು ಮಾಡುವುದಕ್ಕೂ ಚಿಂತನೆ ಮಾಡುತ್ತೆವೆ. ನೌಕರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ವಿ.ಸೋಮಣ್ಣ  ಭರವಸೆ ನೀಡಿದರು.

ನಮ್ಮ ಸರ್ಕಾರದಲ್ಲಿ ಆ ರೀತಿಯ ಯೋಜನೆ ದೇವರಾಣೆಗೂ ಇಲ್ಲ.

ಬಡವರಿಗಾಗಿ ರಿಯಾಯಿತಿ ದರದಲ್ಲಿ ಹಿಂದಿನ ಸರ್ಕಾರ ರೇಷ್ಮೆ ಸೀರೆ ನೀಡಿದ್ದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ನಮ್ಮ ಸರ್ಕಾರದಲ್ಲಿ ಆ ರೀತಿಯ ಯೋಜನೆ ದೇವರಾಣೆಗೂ ಇಲ್ಲ. ಆತರ ಯೋಜನೆಗಳಿಂದ ಯಾರಿಗೂ ಲಾಭ ಇಲ್ಲ. ಆ ಯೋಜನೆಯಲ್ಲಿ ಬಡವರಿಗೆ ರೇಷ್ಮೆ ಸೀರೆ ಸಿಕ್ಕಿಲ್ಲ. ಎಲ್ಲಾ ಶ್ರೀಮಂತರಿಗೆ ರೇಷ್ಮೆ ಸೀರೆ ಸಿಕ್ತು . ಕಳೆದ ಬಾರಿಯ ರೇಷ್ಮೆ ಸಚಿವ್ರು ಐದು ಸಾವಿರ ರೂಗೆ ಸೀರೆ ಕೊಟ್ಟಿದ್ದರು. ಕಳೆದ ಬಾರಿಯ ಸಚಿವರು ನಮ್ಮ ಸ್ನೇಹಿತರು ಅವ್ರ ಬಗ್ಗೆ ನಾನು ಟೀಕೆ ಮಾಡಲ್ಲ. ಅವ್ರು ಯಾವ ಉದ್ದೇಶದಿಂದ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಕೊಡೋ ಪ್ಲಾನ್ ಮಾಡಿದ್ರು ನಂಗೆ ಗೊತ್ತಿಲ್ಲ. ನನಗೆ ಸಂಸ್ಥೆ ಮುಖ್ಯ. ನಮಗೆ ಆ ತರದ ಪಾಪ್ಯುಲರ್ ಸ್ಕೀಮ್ ಅವಶ್ಯಕತೆ ಇಲ್ಲ. ಮಾಜಿ ರೇಷ್ಮೆ ಸಚಿವ ಸಾರಾ ಮಹೇಶ್ ರ ರೇಷ್ಮೆ ಸ್ಕೀಮ್ ಗೆ ಹಾಲಿ ರೇಷ್ಮೆ ಸಚಿವ ಸೋಮಣ್ಣ ಬೇಸರ ವ್ಯಕ್ತಪಡಿಸಿದರು.

ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಕೊಟ್ಟಿದ್ರಿಂದ ಸಂಸ್ಥೆಗೆ 5 ಕೋಟಿ ಲಾಸ್ ಆಗಿರುವ ಕುರಿತು ಮಾತನಾಡಿದ ಸಚಿವ ಸೋಮಣ್ಣ,  ಅದೆಲ್ಲವನ್ನ ನಾನು ಹೇಳೊದಕ್ಕೆ ಆಗಲ್ಲ. ಎಂಡಿ ಜೊತೆ ಮಾತುಕತೆ ನಡೆಸುತ್ತೇನೆ.ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬಹುದಾ ಅಥವಾ ಸರ್ಕಾರದಿಂದ ಆಗಿರುವ ಲಾಸ್ ತುಂಬಬೇಕಾ ಅದ್ರ ಬಗ್ಗೆ ಮಾತನಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

Key words: mysore- Inspection – Suez Farm -KSIC Corporation Factory-minister –v.somanna