ಸಚಿವ ಸ್ಥಾನಕ್ಕೆ ಲಾಬಿ ಶುರು: ನಾನೂ ಆಕಾಂಕ್ಷಿ ಎಂದ ಬಿಜೆಪಿ ಶಾಸಕ…

ಚಿಕ್ಕಮಗಳೂರು,ಆ,16,2019(www.justkannada.in):  ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ನವದೆಹಲಿಗೆ ತೆರಳಿದ ಬೆನ್ನಲ್ಲೆ  ಸಚಿವ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಸಚಿವ ಸ್ಥಾನಕ್ಕೆ ನಾನೂ ಕೂಡ ಆಕಾಂಕ್ಷಿ ಎಂದು ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಎಂಪಿ ಕುಮಾರಸ್ವಾಮಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರ ಶಾಸಕರಾಗಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ಸಚಿವ ಸಂಪುಟ ರಚನೆಗೆ ಒಪ್ಪಿಗೆ ಪಡೆಯಲು ಹೈಕಮಾಂಡ್ ಭೇಟಿಗೆ ನವದೆಹಲಿಗೆ ತೆರಳಿದ್ದು ಮೊದಲ ಹಂತದಲ್ಲಿ 10 ರಿಂದ 12 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಮಧ್ಯೆ ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಲಾಬಿ ಶುರುವಾಗಿದ್ದು ನಿನ್ನೆಯಷ್ಟೆ ಬಾಬೂರಾವ್ ಚಿಂಚನಸೂರ್ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಅವರ ಬೆಂಬಲಿಗರು ಖುದ್ದು ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿದ್ದರು.

ಇದೀಗ ಶಾಸಕ ಎಂ.ಪಿ ಕುಮಾರಸ್ವಾಮಿ  ಸಹ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು,  ನನಗೆ ಸಚಿವ ಸ್ಥಾನ ಕೊಟ್ರೆ ಸಂತಸ.  ಸಮರ್ಥವಾಗಿ ನಾನು ನಿಭಾಯಿಸುತ್ತೇನೆ. ಸಚಿವ ಸ್ಥಾನ ಸಿಗದಿದ್ದರೇ ಬೇಸರ ಇಲ್ಲ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ.  ಸಚಿವ ಸ್ಥಾನಕ್ಕಿಂತ ನಮ್ಮ ತಾಲ್ಲೂಕಿನ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸುತ್ತೇನೆ. ಭಾರಿಮಳೆ ಪ್ರವಾಹದಿಂದ ತಾಲ್ಲೂಕಿನ ಜನತೆ ನಲುಗಿದ್ದಾರೆ. ಹೀಗಾಗಿ ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತೇನೆ ಎಂದರು.

Key words: ministerial –position- Aspirent-BJP MLA.