ಹೆಚ್.ಡಿ ಕೋಟೆ ನೆರೆ ಪ್ರದೇಶಗಳಿಗೆ ಸಚಿವ ವಿ.ಸೋಮಣ್ಣ ಭೇಟಿ, ಪರಿಶೀಲನೆ: ಜನರಿಂದ ಅಹವಾಲು ಸ್ವೀಕಾರ…

ಮೈಸೂರು,ಸೆ,7,2019(www.justkannada.in):  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಇಂದು ಹೆಚ್.ಡಿ.ಕೋಟೆಯ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರವಾಹದ ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ವಿ,ಸೋಮಣ್ಣ  ರಸ್ತೆ, ಸೇತುವೆಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ತಾಲ್ಲೂಕಿನ ಕೆಲ ಗ್ರಾಮಗಳ ಜನರಿಂದ ಅಹವಾಲು ಸ್ವೀಕಾರ ಮಾಡಿದರು.

ಎಂಸಿ ತಳಲು  ಬಂಡಿ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ನುಗು ಜಲಾಶಯ ತುಂಬಿದ ಪರಿಣಾಮ ಸೇತುವೆ ಮುಳುಗಡೆಯಾಗಿ ಹಾನಿಯಾಗಿರುವದನ್ನು ಪರಿಶೀಲಿಸಿದ ಸಚಿವ ವಿ.ಸೋಮಣ್ಣ ಅದನ್ನು  ಕೆಡವಿ ಶಾಶ್ವತವಾದ ನೂತನ ಸೇತುವೆ ನಿರ್ಮಿಸುವಂತೆ  ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಕಿಶೋರ್ ಚಂದ್ರರವರಿಗೆ ಸೂಚನೆ ನೀಡಿದರು.

ಹಾಗೆಯೇ ಹೆಚ್.ಡಿ.ಕೋಟೆ ಅಂಕನಾಥಪುರದ ಸೇತುವೆ ಕುಸಿದಿದ್ದು ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ. ಅದನ್ನು ಪರಿಶೀಲಿಸಿದ ಅವರು, ಸೇತುವೆ ಮತ್ತು ಅಂಕನಾಥಪುರ ರಸ್ತೆಯ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಸಚಿವ ವಿ.ಸೋಮಣ್ಣಗೆ  ಶಾಸಕರಾದ ಅನಿಲ್ ಚಿಕ್ಕಮಾದು, ನಿರಂಜನ್ ಕುಮಾರ್ , ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳ ಶ್ಯಾಂ ಸಾಥ್ ನೀಡಿದರು.

key words: Minister -V Somanna -visits -inspects – HD kote- Flooded area