ಕಂಬಿ ಹಿಂದೆ ಪಬ್ಲಿಕ್ ಟಿವಿ ರಂಗನಾಥ್ : ‘ ಕುಮಾರಸ್ವಾಮಿ ಫಾರ್ ಸಿಎಂ ‘  ಫೇಸ್ ಬುಕ್  ಪುಟದಲ್ಲಿ ವೈರಲ್ …

 

ಬೆಂಗಳೂರು, ಜೂ.07, 2019 : (www.justkannada.in news) : ಸಮಾಜದ ಅಂಕು-ಡೊಂಕು ತಿದ್ದುವ ಭರದಲ್ಲಿ ಲಕ್ಷಣ ರೇಖೆ ದಾಟುತ್ತಿದ್ದ ಮಾಧ್ಯಮಗಳ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ಕಾಲೆಳೆಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ  ಹಿರಿಯ ಪತ್ರಕರ್ತ , ಪಬ್ಲಿಕ್ ಟಿವಿಯ ರಂಗನಾಥ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿರುವುದು ವಿಪರ್ಯಾಸ.

‘ ಕುಮಾರಸ್ವಾಮಿ ಫಾರ್ ಸಿಎಂ ‘ ಎಂಬ ಫೇಸ್ ಬುಕ್ ಪುಟದಲ್ಲಿ ಹಿರಿಯ ಪತ್ರಕರ್ತ, ಪಬ್ಲಿಕ್ ಟಿವಿಯ ಸಂಪಾದಕ ರಂಗನಾಥ್ ಅವರು ಜೈಲಿನ ಕಂಬಿ ಹಿಂದಿರುವ ಫೋಟೋ ಹಾಕಿ, ಕಂಬಿ ಎಣಿಸಲು ರೆಡಿಯಾಗಿರಿ ಪಬ್ಲಿಕ್ ಟಿವಿ ರಂಗ ಅಂಡ್ ಟೀಮ್ ಎಂದು ಲೇವಡಿ ಮಾಡಲಾಗಿದೆ.

ಬಳ್ಳಾರಿಯ ಕೃಷ್ಣದೇವರಾಯ ಬೋಧಕ- ಬೋಧಕೇತರ ಸಿಬ್ಬಂದಿ ಪರೀಕ್ಷೆಯಲ್ಲಿ ಗೈರು ಹಾಜರಾದ ಅಭ್ಯರ್ಥಿಗಳ ಹಾಲ್ ಟಿಕೆಟ್ ಅನ್ನು ನಕಲು ಮಾಡಿ, ಅದರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಪಾಲರ ಫೋಟೋ ಅಂಟಿಸಿ ಸುದ್ಧಿ ಬಿತ್ತರಿಸಲಾಗಿತ್ತು. ಮೇಲ್ವಿಚಾರಕರ ಬೇಜಾಬ್ದಾರಿತನದಿಂದ ಹಾಲ್ ಟಿಕೆಟ್ ನಲ್ಲಿ ಯಾರ ಭಾವಚಿತ್ರವಿದೆ ಎಂಬುದನ್ನು ಗಮನಿಸದೆಯೇ ಪರೀಕ್ಷೆ ಬರೆಸಲಾಗಿದೆ ಎಂಬ ಸುಳ್ ಸುದ್ಧಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಈ ಸಂಬಂಧ ವಿವಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯ ಜಿಲ್ಲಾ ವರದಿಗಾರ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

ಈ ಘಟನೆಯನ್ನು ನೆಪವಾಗಿಟ್ಟುಕೊಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಪಬ್ಲಿಕ್ ಟಿವಿ ವಿರುದ್ಧ ಅದರಲ್ಲೂ  ಹಿರಿಯ ಪತ್ರಕರ್ತ, ಸಂಪಾದಕ ರಂಗನಾಥ್ ಅವರ ವಿರುದ್ಧ ಕಮೆಂಟ್ಸ್ ಪೋಸ್ಟ್ ಮಾಡಲಾಗುತ್ತಿದೆ . ಜೈಲು ಕಂಬಿ ಹಿಂದಿರುವ ಫೋಟೋ ಹಾಕಿ ಸದ್ಯದಲ್ಲೇ ಈ ಸ್ಥಿತಿ ಬರಲಿದೆ ಎಂದು ರಂಗನಾಥ್ ಅವರನ್ನು ಟೀಕಿಸಲಾಗಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರನ್ನಿಟ್ಟುಕೊಂಡಿರುವ ‘ ಕುಮಾರಸ್ವಾಮಿ ಫಾರ್ ಸಿಎಂ ‘ ಎಂಬ ಫೇಸ್ ಬುಕ್ ಪುಟದಲ್ಲಿ ಇಂಥ ಪೋಸ್ಟ್ ಪ್ರಕಟವಾಗಿರುವುದು ಆಶ್ಚರ್ಯಕ್ಕೆ ಎಡೆ ಮಾಡಿದೆ.

key words : media-public-ranganath-university-bellary-journalist