ಹೊಂದಾಣಿಕೆ ರಾಜಕಾರಣ ಆರೋಪ: ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಿಎಂ ಬೊಮ್ಮಾಯಿ ಟಾಂಗ್.

ಬೆಂಗಳೂರು,ಜೂನ್,15,2023(www.justkannada.in): ಬಿಜೆಪಿಯ ಕೆಲ ಮಹಾನ್ ನಾಯಕರು ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ಧ ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನನ್ನ ಜೀವನದಲ್ಲೇ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ನನಗೆ ಹೊಂದಾಣಿಕೆ ರಾಜಕೀಯ ಅವಶ್ಯಕತೆಯೂ ಇಲ್ಲ ಸಿದ್ದಾರಾಮಯ್ಯ ವಿರುದ್ಧ  5 ಕೇಸ್  ದಾಖಲಿಸಿದ್ದೇವೆ. 65 ಎಸಿಬಿ ಕೇಸ್ ಗಳನ್ನ ಲೋಕಾಯುಕ್ತಕ್ಕೆ ನೀಡಿದ್ದೇವೆ ಎಂದರು.

ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು  ಕೇಂದ್ರ ತಿರಸ್ಕಾರ  ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲವೆಂದು ಸಿಎಂ ಆರೋಪಿಸಿದ್ದಾರೆ. ಅಕ್ಕಿ ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್​ ಈಗ ಜನರಿಗೆ ಮೋಸ ಮಾಡ್ತಿದೆ. ರೈತರಿಗೆ, ಜನರಿಗೆ ಕೊಟ್ಟ‌ ಮಾತಿಂದ ತಪ್ಪಿಸಿಕೊಳ್ಳಲು ರಾಜಕಾರಣ ಮಾಡುತ್ತಿದೆ. ಆಹಾರ ಭದ್ರತಾ ಕಾಯ್ದೆಯಡಿ ಎಲ್ಲರಿಗೂ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿದೆ. ಯಾವುದೇ ಖರ್ಚು ಇಲ್ಲದೇ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಸಾಗಣೆ ವೆಚ್ಚ, ನಿರ್ವಹಣಾ ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸತ್ಯ ಹೇಳಬೇಕೆಂದ್ರೆ ರಾಜ್ಯ ಸರ್ಕಾರ 10 ಕೆಜಿ ಹೆಚ್ಚುವರಿ ಅಕ್ಕಿ ಕೊಡಬೇಕು. ಕೇಂದ್ರ ನೀಡುವ ಅಕ್ಕಿ ಸೇರಿ ರಾಜ್ಯ ಸರ್ಕಾರ ಒಟ್ಟು 15 ಕೆಜಿ ಅಕ್ಕಿ ನೀಡಬೇಕು. ಆದ್ರೆ ಕೇಂದ್ರದ 5 ಕೆಜಿ, ರಾಜ್ಯದ 5 ಕೆಜಿ ಸೇರಿಸಿ 10 ಕೆಜಿ ನೀಡ್ತೀವಿ ಎನ್ನುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ಅಲ್ಪಾವಧಿಯ ಟೆಂಡರ್ ಆದ್ರೂ ಕರೆಯಬೇಕಿತ್ತು. ಅಂದೇ ನೀವು ಟೆಂಡರ್ ಕರೆದಿದ್ರೆ ಈ ಸಮಸ್ಯೆಯಾಗುತ್ತಿರಲಿಲ್ಲ ನೀವು ಮೊದಲ  ಕ್ಯಾಬಿನೆಟ್ ಸಭೆಯಲ್ಲೇ ಟೆಂಡರ್ ಕರೆಯಬೇಕಿತ್ತು ಎಂದು ಬೊಮ್ಮಾಯಿ ತಿಳಿಸಿದರು.

Key words: never- done- compromise- politics -Former CM- Bommai.