ಶೀಘ್ರವೇ ಭೂ ಪರಿವರ್ತನೆ ಕಾಯ್ದೆ ತಿದ್ದುಪಡಿ ಜಾರಿ: ಸಚಿವ ಆರ್. ಅಶೋಕ್

ಬೆಂಗಳೂರು, ಮೇ 29, 2022 (www.justkannada.in): ರಾಜ್ಯದಲ್ಲಿ ಶೀಘ್ರವೇ ಭೂ ಪರಿವರ್ತನೆ ಕಾಯ್ದೆ ತಿದ್ದುಪಡಿ ಮಾಡಿ ಜಾರಿ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಕಾಯ್ದೆಗಳನ್ನು ಸರಳೀಕರಣಗೊಳಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಈಗಾಗಲೇ ಜನರ ಮನೆ ಬಾಗಿಲಿಗೆ ಸರ್ಕಾರದ ಯೋಜನೆ ನೀಡುತ್ತಿದೆ ಎಂದು  ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯ ವಡಗಾಂವ ದೇಶಮುಖ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ವಯಂ ಪೋಡಿ (11ಇ ಸ್ಕೆಚ್) ಕಾನೂನು ಸರಳೀಕರಣ ಮಾಡಿದಂತೆ ಕೃಷಿಯೇತರ ಜಮೀನಿಗೆ ಅರ್ಜಿ ಸಲ್ಲಿಸುವವರು ಅಧಿಕಾರಿಗಳ ಅನುಮೋದನೆಗಾಗಿ ವರ್ಷಗಟ್ಟಲೆ ಕಾಯುವ ವ್ಯವಸ್ಥೆ ಮುಕ್ತಗೊಳಿಸಲು ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.