ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕೊರತೆ ಆಗಿಲ್ಲ- ಇಂಧನ ಸಚಿವ ಸುನೀಲ್ ಕುಮಾರ್

ನವದೆಹಲಿ,ಅಕ್ಟೋಬರ್,9,2021(www.justkannada.in) ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ  ಸ್ಥಗಿತ ಆಗಿಲ್ಲ.  ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ ಅಷ್ಟೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ಕರ್ನಾಟಕ ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿತ್ತು. 12 ರೇಕ್​ಗಳಲ್ಲಿ ಕೇಂದ್ರ ಸರಕಾರ ಕಲ್ಲಿದ್ದಲು ಸರಬರಾಜು ಮಾಡಬೇಕಿತ್ತು. ಗಣಿಗಳಲ್ಲಿ ಮಳೆ‌ ಹೆಚ್ಚಾದ ಕಾರಣ ಉತ್ಪಾದನೆ ಕೊರತೆ ಸೃಷ್ಟಿಯಾಗಿದೆ. 8 ರೇಕ್​ಗಳಲ್ಲಿ ಸದ್ಯ ಕೇಂದ್ರ ಸರಕಾರ ಕಲ್ಲಿದ್ದಲು ಸರಬರಾಜು ಮಾಡುತ್ತಿದೆ. ಮುಂದಿನ ವಾರದಲ್ಲಿ 2 ರೇಕ್ ಕಲ್ಲಿದ್ದಲು ಬರಲಿದೆ ಎಂದು ತಿಳಿಸಿದರು.

 ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಕೊರತೆಯಾಗಿಲ್ಲ. ಕಲ್ಲಿದ್ದಲು ಕೊರತೆಯಿಂದ ಸ್ಥಾವರಗಳು ಬಂದ್ ಆಗಿಲ್ಲ. ಎರಡು ಸ್ಥಾವರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿದೆ ಅಷ್ಟೇ. ಮೂರು ನಾಲ್ಕು ದಿನಗಳಲ್ಲಿ ಸಮಸ್ಯೆ‌ ಬಗೆಹರಿಯಲಿದೆ. ಮುಂದಿನ ವಾರದಲ್ಲಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಾಗಲಿದೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

Key words:  lack of coal -not – shortage – power generation-Minister – Sunil Kumar,