ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆಗೆ ಶರಣು….

ಬೆಂಗಳೂರು,ಅ,12,2019(www.justkannada.in): ಐಟಿ ದಾಳಿಯಲ್ಲಿ ಸಿಲುಕಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಡಾ.ಜಿ.ಪರಮೇಶ್ವರ್ ಅವರ  ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡಾ.ಜಿ,ಪರಮೇಶ್ವರ್ ಪಿಎ ರಮೇಶ್ ಸಾಯಿ ಗ್ರೌಂಡ್ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡಾ.ಜಿ.ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿಯಾದ ನಂತರ ಬೇಸತ್ತಿದ್ದ ರಮೇಶ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು. ಕೆಲವರ ಬಳಿ ಸಾಯುವುದಾಗಿಯೂ ಹೇಳಿದ್ದರಂತೆ.

ಇನ್ನು ರಮೇಶ್ ಕೇಂಗೇರಿಯ ಉಲ್ಲಾಳ ನಿವಾಸಿಯಾಗಿದ್ದು ಕಳೆದ 8 ವರ್ಷಗಳಿಂದ ಡಾ.ಜಿ.ಪರಮೇಶ್ವರ್ ಜತೆ ಕೆಲಸ ಮಾಡುತ್ತಿದ್ದರು. ಈ ಮೊದಲು ಕೆಪಿಸಿಸಿ ಕಚೇರಿಯಲ್ಲೂ ಕೆಲಸ ನಿರ್ವಹಿಸಿದ್ದರು. ಆದರೆ ಪರಮೇಶ್ವರ್ ನಿವಾಸದ ಮೇಲೆ ಐಟಿ ರೇಡ್ ಆಗುತ್ತಿದ್ದಂತೆ ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾನು ಐಟಿ ವಿಚಾರಣೆ ಎದುರಿಸಲು ಆಗಲ್ಲ. ನಾನು ಬಡವ. ನಾನು ನಿಯ್ಯತ್ತಿನಿಂದ ಬದುಕುತ್ತಿದ್ದೇನೆ. ಮನೆ ಕಟ್ಟಿಸುತ್ತಿದ್ದೇನೆ. ಅನ್ಯಾಯದಿಂದ ನನ್ನ ಮನೆ ಮೇಲೆ ಐಟಿ ದಾಳಿ ನಡೆಸುತ್ತಿದ್ದಾರೆ. ಅವರು ಸಿಕ್ಕಾಪಟ್ಟೆ ಪ್ರಶ್ನೆ ಕೇಳ್ತಾರೆ. ಅದನ್ನ ಎದುರಿಸಲು ಆಗಲ್ಲ. ನಾನು ಸಾಯುತ್ತೇನೆ ಎಂದು ಆಪ್ತರೊಬ್ಬರಿಗೆ ರಮೇಶ್ ತಿಳಿಸಿದ್ದರು ಎನ್ನಲಾಗಿದೆ.

Key words: IT –raid-  Former DCM Dr G Parameshwar-PA- Surrender – suicide.