ಕೆಎಸ್ ಆರ್ ಟಿಸಿ ಮುದ್ರಾಣಾಲಯದಲ್ಲಿ ‘ಇಟಿಎಂ ಸ್ಲಿಟಿಂಗ್ ಯಂತ್ರ’ಗಳ ಉದ್ಘಾಟನೆ…

kannada t-shirts

ಬೆಂಗಳೂರು,ಸೆಪ್ಟಂಬರ್,14,2020(www.justkannada.in):  ಕರ್ನಾಟಕ ರಾಜ್ಯ ಸಾರಿಗೆ ಮುದ್ರಾಣಾಲಯವು ತನ್ನ ಆಧುನೀಕರಣದ ಪ್ರಕ್ರಿಯೆಯ ಭಾಗವಾಗಿ ಹೊಸದಾಗಿ 2 ಇಟಿಎಂ ಸ್ಲಿಟಿಂಗ್ ಯಂತ್ರಗಳನ್ನು ಅಳವಡಿಸಿದ್ದು, ಈ ಯಂತ್ರಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾದ ಎಂ.ಚಂದ್ರಪ್ಪ ಚಾಲನೆ ನೀಡಿದರು.inauguration-atm-slitting-machine-bangalore-ksrtc

ಒಂದು ಇಟಿಎಂ ಸ್ಲಿಟಿಂಗ್ ಯಂತ್ರದ ಬೆಲೆ ರೂ.10 ಲಕ್ಷಗಳಾಗಿದೆ. ಈ  ಯಂತ್ರಗಳಲ್ಲಿ ಉತ್ಪಾದಿಸುವ ಥರ್ಮಲ್ ರೋಲ್‍ಗಳನ್ನು ನಿರ್ವಾಹಕರು ತಮ್ಮ ಇಟಿಎಂ ಯಂತ್ರಗಳಲ್ಲಿ ಉಪಯೋಗಿಸಿ, ಪ್ರಯಾಣಿಕರಿಗೆ ಬಸ್ ಟಿಕೆಟ್‍ಗಳನ್ನು ವಿತರಿಸುತ್ತಾರೆ. ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೇ ಪ್ರಪ್ರಥಮ ಬಾರಿಗೆ ಈ ಮಾದರಿಯ ಯಂತ್ರಗಳನ್ನು ನಿಗಮವು ಅನುಷ್ಠಾನಗೊಳಿಸಿದೆ.

ಸ್ಲಿಟಿಂಗ್ ಯಂತ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷ ಎಂ.ಚಂದ್ರಪ್ಪ, ಪ್ರಧಾನ ಮಂತ್ರಿಯವರ ಆಶಯದಂತೆ, ಆತ್ಮ ನಿರ್ಭರ ಯೋಜನೆಯಡಿ ಯಂತ್ರಗಳು ಸಂಪೂರ್ಣ ದೇಶೀಯಯಂತ್ರಗಳಾಗಿದ್ದು, ಸದರಿ ಯಂತ್ರಗಳಲ್ಲಿನ ಇಟಿಎಂ ರೋಲ್‍ಗಳಲ್ಲಿ ಪ್ಲಾಸ್ಟಿಕ್ ಕೊಳವೆ (ಪೈಪ್) ಯನ್ನು ಉಪಯೋಗಿಸದೆ ತಯಾರಿಸಬಹುದಾಗಿದ್ದು, ಪ್ಲಾಸ್ಟಿಕ್ ಹೊರತಾದ ಟಿಕೆಟ್ ಇದಾಗಿದ್ದು, ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿರುತ್ತದೆ. ಈ ರೀತಿಯ ಪ್ಲಾಸ್ಟಿಕ್ ಕೊಳವೆ ರಹಿತ ಇ.ಟಿ.ಎಂ. ರೋಲ್‍ ಗಳನ್ನು ಉಪಯೋಗಿಸುತ್ತಿರುವ ನಮ್ಮ ನಿಗಮವು, ದೇಶದಲ್ಲಿಯೇ ಪ್ರಥಮ ರಸ್ತೆ ಸಾರಿಗೆ ನಿಗಮವಾಗಿದೆ ಎಂದು ನುಡಿದರು.

ಕರಾಸಾ ನಿಗಮ ಮತ್ತು ಅದರ ಅಂಗ ಸಂಸ್ಥೆಗಳಿಗೆ ಪ್ರತಿ ವರ್ಷ 1.50 ಕೋಟಿಯಷ್ಟು ಇ.ಟಿ.ಎಂ. ರೋಲ್‍ ಗಳು ಖಾಸಗಿಯವರಿಂದ ಸರಬರಾಜಾಗುತ್ತಿದ್ದು, ಪ್ಲಾಸ್ಟಿಕ್ ಕೊಳವೆಗೆ ಪ್ರತಿಯೊಂದಕ್ಕೆ 50 ಪೈಸೆಯಂತೆ ಅಂದಾಜು ಪ್ರತಿ ವರ್ಷ 75 ಲಕ್ಷ ರೂಪಾಯಿಗಳ ಉಳಿತಾಯವಾಗುತ್ತದೆ. ಕರಾಸಾ ಮುದ್ರಣಾಲಯದಲ್ಲಿ  ಈ ಯಂತ್ರಗಳಿಂದ ಪ್ರತಿದಿನ 16,000 ರೋಲ್‍ ಗಳನ್ನು ತಯಾರಿಸಬಹುದಾಗಿದ್ದು, ಇದರಿಂದ ಸಂಸ್ಥೆಗೆ ವಾರ್ಷಿಕ ರೂ.4.80 ಕೋಟಿ ಆದಾಯವನ್ನು ನಿರೀಕ್ಷಿಸಬಹುದಾಗಿದೆ ಎಂದು ಚಂದ್ರಪ್ಪ ತಿಳಿಸಿದ್ದಾರೆ. inauguration-atm-slitting-machine-bangalore-ksrtc

ಯಂತ್ರಗಳಿಂದ ಉತ್ಪಾದಿಸುವ ಇಟಿಎಂ ರೋಲ್‍ಗಳನ್ನು ಕರಾಸಾ ನಿಗಮದ ಎಲ್ಲಾ ವಿಭಾಗಗಳಿಗೆ ಸರಬರಾಜು ಮಾಡಬಹುದಾಗಿದ್ದು, ನಿಗಮಕ್ಕೆ ಖಾಸಗಿಯವರ ಮೇಲೆ ಅವಲಂಬಿತವಾಗುವುದು ತಪ್ಪಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಎರಡು ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಇತರೆ ಮೂರು ನಿಗಮಗಳಿಗೂ ಕೂಡ ಇಟಿಎಂ ರೋಲ್‍ಗಳನ್ನು ಸರಬರಾಜು ಮಾಡಬಹುದಾಗಿರುತ್ತದೆ ಎಂದು ತಿಳಿಸಿದರು.

ನಿಗಮವು ಬಹಳ ಕಷ್ಟವನ್ನು ಅನುಭವಿಸುತ್ತಿರುವ ಈ ದಿನಗಳಲ್ಲಿ ಪ್ರತಿಯೊಬ್ಬರೂ ಈ ಸಂಸ್ಥೆಗೆ ಏನಾದರೂ ಒಳ್ಳೆಯದನ್ನು ಮಾಡುವ ಚಿಂತನೆ ಮಾಡಿ ಇನ್ನಷ್ಟೂ ದಕ್ಷತೆಯಿಂದ ದುಡಿಯಬೇಕು. ಸಂಸ್ಥೆಯು ಪ್ರಯಾಣಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಕಾರ್ಯಕ್ರಮಗಳು ಇರಬೇಕು. ಸಂಸ್ಥೆಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ, ಪ್ರಸ್ತುತ ಒದಗಿ ಬಂದಿರುವ ಪರಿಸ್ಥಿತಿ ಸುಧಾರಿಸುವ ನಂಬಿಕೆ ಇದೆ. ನಾವೆಲ್ಲರೂ ಒಟ್ಟಾಗಿ ದುಡಿಯೋಣ ಈ ಸಂಸ್ಥೆಯನ್ನು ಪ್ರಗತಿಯ ಹಾದಿಯಲ್ಲಿ ತರೋಣವೆಂದು ತಿಳಿಸಿದರು. ಈ ವೇಳೆ ಕೆಎಸ್‍ಆರ್‍ಟಿಸಿ ನಿರ್ದೇಶಕರು(ಸಿ&ಪ) ವೆಂಕಟೇಶ್ ಟಿ,  ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Inauguration – ATM -Slitting Machine –bangalore- KSRTC

website developers in mysore