ರಸ್ತೆ ಬದಿಯಲ್ಲಿ ನೂರು‌ ರೂ. ಮುಖ ಬೆಲೆಯ‌ ನೋಟು ಬಿದ್ದಿರುವುದನ್ನು‌ ಕಂಡು ಬೆಚ್ಚಿ‌ ಬಿದ್ದ ಸ್ಥಳೀಯರು

ಮೈಸೂರು, 27, ಏಪ್ರಿಲ್ 2020: ಬೆಳಿಗ್ಗೆ ಎದ್ದ ತಕ್ಷಣ ಮನೆಯ ಮುಂದೆ ಬಿದ್ದಿದ್ದ ನೂರು ರೂ.ಮುಖಬೆಲೆಯ ನೋಟೊಂದು ವ್ಯಕ್ತಿಯೋರ್ವರಲ್ಲಿ ಆತಂಕ ಸೃಷ್ಟಿಸಿದ ಘಟನೆ ರಾಮಕೃಷ್ಣ ನಗರದ ಐ ಬ್ಲಾಕ್ ನಲ್ಲಿ ನಡೆದಿದೆ.

ರಾಮಕೃಷ್ಣ ನಗರದ ಐ ಬ್ಲಾಕ್ ನಿವಾಸಿ ರಂಗನಾಥ್ ಎಂಬವರ ಮನೆಯ ಎದುರು ನೂರು ರೂ ಮುಖ ಬೆಲೆಯ ನೋಟೊಂದು ಬಿದ್ದಿತ್ತು. ರಂಗನಾಥ್ ತಮ್ಮ ಅಕ್ಕಪಕ್ಕದ ಮನೆಯವರಲ್ಲಿ ಯಾರಾದರೂ ನೂರು ರೂ.ಬೀಳಿಸಿದ್ದೀರಾ ಎಂದು ವಿಚಾರಿಸಿದ್ದು, ಎಲ್ಲರೂ ತಮ್ಮದಲ್ಲವೆಂದು ತಿಳಿಸಿದ್ದಾರೆ.

ಕೂಡಲೇ ಕುವೆಂಪು ನಗರ ಠಾಣೆಯ ಪೊಲೀಸರಿಗೆ ಪೋನಾಯಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಯಾನಿಟೈಸರ್ ಮಾಡುವ ಮೂಲಕ ನೋಟನ್ನು ಎತ್ತಿಕೊಂಡು ಪರಿಶೀಲನೆಗೆ ಕೊಂಡೊಯ್ದಿದ್ದಾರೆ.

ಕುವೆಂಪುನಗರ ಠಾಣೆಯ ಎಎಸ್ ಐ ಕಾಂತರಾಜು ಮತ್ತು ದಫೇದಾರ್ ಗೌಡ್ರು ಸ್ಥಳಕ್ಕೆ ಭೇಟಿ ನೀಡಿದ್ದರು. ನೂರು ರೂ.ನೋಟು ಬಿದ್ದಿರುವುದು ಇದೀಗ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.