ಎಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲೇ ‘ಕೋಳಿ ಜಗಳ’ ! ಬಿಇಒ-ಸಿಬ್ಬಂದಿ ಜಟಾಪಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮೈಸೂರು, ನವೆಂಬರ್ 13, 2019 (www.justkannada.in): ಎಚ್ ಡಿ ಕೋಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ದ್ವಿತೀಯ ದರ್ಜೆ ಗುಮಾಸ್ತನ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪಟ್ಟಣದ ಬಿಇಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ರವಿಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ನಡುವಿನ ಜಗಳ ಸಂಬಂಧ ಇಬ್ಬರೂ ಪಟ್ಟಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ತಮ್ಮ ಸಂಬಂಧಿಕ ಶಿಕ್ಷಕರ ನಿಯೋಜನೆ ಸಂಬಂಧ ರವಿಕುಮಾರ್ ಹಾಗೂ ರೇವಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ರೇವಣ್ಣ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ರವಿಕುಮಾರ್ ಕೂಡ ಜಾತಿ ನಿಂದನೆ ಸೇರಿದಂತೆ ಹಲವು ಆರೋಪ ಮಾಡಿ ಪ್ರತಿ ದೂರು ದಾಖಲಿಸಿದ್ದಾರೆ.