ಪಠ್ಯಪುಸ್ತಕ ಪರಿಷ್ಕರಣೆ ಹಿಂಪಡೆಯುವಂತೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ಬೆಂಗಳೂರು,ಜೂನ್,20,2022(www.justkannada.in): ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಹಿನ್ನೆಲೆ ಪರಿಷ್ಕರಣೆಗೊಂಡ ಪುಸ್ತಕಗಳನ್ನ ಹಿಂಪಡೆದು ಬರಗೂರು ರಾಮಚಂದ್ರ ಅವರ ಪಠ್ಯಪುಸ್ತಕವನ್ನೇ ಮುಂದುವರೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಹೆಚ್.ಡಿ ದೇವೇಗೌಡರು, ಶಾಲಾ ಪಠ್ಯ ಪುಸ್ತಕ ಮರು ಪರಿಷ್ಕರಣೆಗೆ ನೇಮಿಸಿದ ಅಧ್ಯಕ್ಷರು ನಾಡಗೀತೆಗೆ ಅಪಮಾನ ಮಾಡಿದ್ದಾರೆ. ಇದು ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿದ ಅವಮಾನ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ. ಇಂತಹ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದು ಸರಿಯಲ್ಲ. ಕುವೆಂಪು ಭಾವಚಿತ್ರ ಮತ್ತು ಬಸವಣ್ಣನವರ ಆಶಯವುಳ್ಳ ಭಾಗವನ್ನು ಕೈ ಬಿಡಲಾಗಿದೆ.

ಹೀಗಾಗಿ ಕೂಡಲೇ ಪಠ್ಯಪುಸ್ತಕ ಪರಿಷ್ಕರಣೆ ಹಿಂಪಡೆದು ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತ. ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಶಿಸುತ್ತೇನೆ’ ಎಂದು ಪತ್ರದ ಮೂಲಕ ಸಿಎಂ ಬೊಮ್ಮಾಯಿಗೆ ಹೆಚ್.ಡಿ ದೇವೇಗೌಡರು ಮನವಿ ಮಾಡಿದ್ದಾರೆ.

Key words: Former Prime Minister-HD Deve Gowda -CM Bommai – withdraw – textbook revision.