ನಾಲೆಗೆ ಎತ್ತಿನಗಾಡಿ ಬಿದ್ದು ರೈತ ಸಾವು.

ಮೈಸೂರು,ಜೂನ್,27,2022(www.justkannada.in): ಆಕಸ್ಮಿಕವಾಗಿ ನಾಲೆಗೆ ಎತ್ತಿನಗಾಡಿ ಮಗುಚಿ ಬಿದ್ದ ಪರಿಣಾಮ ಎತ್ತಿನಗಾಡಿ ಚಲಾಯಿಸುತ್ತಿದ್ದ ರೈತ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಶ್ರೀರಾಮಪುರ ಗ್ರಾಮದ ಬಳಿ ನಡೆದಿದೆ.

ಕೆಸ್ತೂರು ಕೊಪ್ಪಲು ಗ್ರಾಮದ ಚಂದ್ರೇಗೌಡ(53) ಮೃತಪಟ್ಟವರು. ಮೃತ ರೈತ ಚಂದ್ರೇಗೌಡ ಶ್ರೀರಾಮಪುರ ಗ್ರಾಮದ ಮುರ್ ಕಟ್ಟೆ ಬಳಿ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ  ಬರುತ್ತಿದ್ದಾಗ ರಾಮಸಮುದ್ರ ಬಲದಂಡೆಗೆ ಎತ್ತಿನ ಗಾಡಿ ಮಗುಚಿ ಬಿದ್ದಿದೆ.

ಘಟನೆ ನಡೆಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಧಾವಿಸಿದ ಅಕ್ಕ-ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು, ರೈತ ಚಂದ್ರೇಗೌಡರ ಪ್ರಾಣ ಉಳಿಸಲು ಪ್ರಯತ್ನಿಸಿದರು. ಆದರೂ ಸಹ ರೈತ ಚಂದ್ರೇಗೌಡರು ಬದುಕುಳಿಯಲಿಲ್ಲ. ಮೃತ ರೈತನಿಗೆ ಹೆಂಡತಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.

ಘಟನ ಸ್ಥಳಕ್ಕೆ ಚುಂಚನಕಟ್ಟೆ ಉಪ ಪೊಲೀಸ್ ಠಾಣೆಯ ಎ.ಎಸ್ .ಐ ವಸಂತ್, ಸಿಬ್ಬಂದಿಗಳಾದ ದಯಾನಂದ್, ರಾಮೇನಹಳ್ಳಿ ಮಂಜು ಭೇಟಿ ನೀಡಿ ಪರೀಶೀಲನೆ ನಡೆಸಿದರು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Farmer- death – Carriage-mysore