ದಸರೆ: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮಣ್ಣ ಓಟಕ್ಕೆ ನೀತಿ ಸಂಹಿತೆ ಬ್ರೇಕ್

ಮೈಸೂರು, ಸೆಪ್ಟೆಂಬರ್ 22, 2019 (www.justkannada.in): ದಸರಾ ಸಂಬಂಧ ಸಾಕಷ್ಟು ಚುರುಕಾಗಿ ಕೆಲಸ ಮಾಡುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಚುನಾವಣಾ ನೀತಿ ಸಂಹಿತೆ ಬ್ರೇಕ್ ಹಾಕಿದೆ.

ನಾಡಹಬ್ಬ ದಸರಾ ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತು ಮುನ್ನೆಡೆಯುತ್ತಿದ್ದ ವಿ.ಸೋಮಣ್ಣ ಅವರು ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಸಭೆ- ಸಮಾರಂಭಗಳನ್ನು ನಡೆಸಿ ದಸರಾ ಸಂಬಂಧ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.

ಕಡಿಮೆ ದಿನಗಳಲ್ಲಿ ಅಧಿಕಾರಿಗಳ ಬೆನ್ನಟ್ಟಿ ದಸರಾ ಕಾರ್ಯಕ್ರಮಗಳನ್ನ ಯಶಸ್ವಿ ದಡದತ್ತ ಕೊಂಡೊಯ್ಯುತ್ತಿದ್ದ ಸಚಿವ ಸೋಮಣ್ಣ ಅವರಿಗೆ ಇದೀಗ ನೀತಿ ಸಂಹಿತಿ ಅಡ್ಡಿಯಾಗಿದೆ. ನೆನ್ನೆ ಸಂಜೆ ಹುಣಸೂರು ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಸಚಿವರ ಓಡಾಟ ಕಡಿಮೆಯಾಗಿದೆ. ಸದ್ಯ ಚುನಾವಣಾ ಆಯೋಗದ ಆದೇಶದಂತೆ ಜನಪ್ರತಿನಿಧಿಗಳು ಅನುಮತಿ ಪಡೆಯದೇ ಯಾವುದೇ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಹೀಗಾಗಿ ಈ ಬಾರಿಯೂ ದಸರಾ ಆಚರಣೆಯಲ್ಲೂ ಅಧಿಕಾರಿಗಳದ್ದೇ ಮೇಲುಗೈಯಾಗಲಿದೆ.