ಬೆಂಗಳೂರು ಪಶ್ಚಿಮ ಕೋವಿಡ್ ಸ್ಥಿತಿಗತಿ ಪರಿಶೀಲಿಸಿದ ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು, ಜುಲೈ 23, 2020 (www.justkannada.in): ನಗರದ ಪಶ್ಚಿಮ ವಿಭಾಗದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಬುಧವಾರ ಮಹತ್ವದ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮತ್ತಷ್ಟು ಹೆಚ್ಚುವರಿ ಕ್ರಮಗಳನ್ನು ಕೈಗೊಂಡು ಸೋಂಕಿತರಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಒಂದೆಡೆ ಸೋಂಕಿತರನ್ನು ಗುರುತಿಸಿ ಅವರನ್ನು ಆಸ್ಪತ್ರೆಗಳಿಗೆ ಅಥವಾ ಕೋವಿಡ್ ಆರೈಕೆ ಕೇಂದ್ರಗಳಿಗೆ ಶಿಫ್ಟ್ ಮಾಡುವುದು ಹಾಗೂ ಹೋಮ್ ಕೋರಂಟೈನ್ ಅಗಲು ಬಯಸುವವರಿಗೆ ಅಗತ್ಯ ಸೌಕರ್ಯಗಳನ್ನು ಮಾಡುವುದೂ ಸೇರಿದಂತೆ ಅಗತ್ಯವಾದ ಎಲ್ಲ ಕೆಲಸಗಳನ್ನು ಯುದ್ಧೋಪಾದಿಯಲ್ಲಿ ಮಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು ಡಿಸಿಎಂ.

ಖಾಸಗಿ ಆಸ್ಪತ್ರೆಗಳಿಂದ ಹಾಸಿಗೆಗಳನ್ನು ಪಡೆಯುವ ಬಗ್ಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ ಕೆಲ ಖಾಸಗಿ ಆಸ್ಪತ್ರೆಗಳಿಂದ ಈವರೆಗೂ ಹಾಸಿಗೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ರಾಜಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್’ಗಳಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಹಾಸಿಗೆಗಳನ್ನು ನೀಡಲು ಅವರು ಒಪ್ಪಿಕೊಂಡಿದ್ದಾರೆ. ಕೂಡಲೇ ಹಾಸಿಗೆಗಳನ್ನು ವಶಕ್ಕೆ ಪಡೆದು ಅವುಗಳನ್ನು ಸೋಂಕಿತರಿಗಾಗಿ ಸಜ್ಜುಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಪೀಣ್ಯಾದ ಯುರೋಪಿಯನ್ ಲ್ಯಾಬಿನಲ್ಲಿ ದಿನಕ್ಕೆ 250 ಕೋವಿಡ್ ಪರೀಕ್ಷೆಗಳು ನಡೆಯುತ್ತಿದ್ದು, ಆ ಪ್ರಮಾಣವನ್ನು 1000ಕ್ಕೆ ಹೆಚ್ಚಿಸಬೇಕು. ಪಶ್ಚಿಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಬೇಕು ಹಾಗೂ ಇಂಥ ಕೇಂದ್ರಗಳಲ್ಲಿ ಬೆಡ್,ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಎಲ್ಲಡೆ ಫೀವರ್ ಕ್ಲೀನಿಕ್ಕುಗಳನ್ನು ಸ್ಥಾಪಿಸಬೇಕು. ಕೋವಿಡ್ ಮತ್ತು ಕೋವಿಡ್’ರಹಿತ ರೋಗಿಗಳನ್ನು ಸಮಾನ ಆದ್ಯತೆಯ ಮೇರೆಗೆ ನೋಡಬೇಕು, ಜತೆಗೆ ಯಾವುದೇ ರೀತಿಯ ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಭಾಗದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿಯೂ ಟೆಸ್ಟಿಂಗ್ ಲ್ಯಾಬುಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು. ಆಂಟಿಜನ್ ಟೆಸ್ಟಿಂಗ್ ವ್ಯವಸ್ಥೆ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಒಂದು ಕ್ಷಣವೂ ಮೈಮರೆಯದೇ ಕೆಲಸ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.

ವಾರ್ಡ್’ಗೊಂದು ಹೆಲ್ಪ್’ಲೈನ್:

ಎಲ್ಲ ವಿಧಾನಸಭೆ ಕ್ಷೇತ್ರಗಳ ಪ್ರತಿ ವಾರ್ಡಿಗೊಂದು ಹೆಲ್ಪ್’ಲೈನ್ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಡಿಸಿಎಂ, ವಿಭಾಗೀಯ ಹೆಲ್ಪ್’ಲೈನ್ ಸಂಖ್ಯೆಯಾದ 080- 68248454 ಗೆ ಸಾರ್ವಜನಿಕರು ಕರೆ ಮಾಡಬಹುದು. ಇದರ ಜತೆಗೆ, ಕೋವಿಡ್’ಗಾಗಿಯೇ ಇರುವ 104, 108, 14410, 1912 ಸಂಖ್ಯೆಗಳಿಗೂ ಕರೆ ಮಾಡಬಹುದು. ನಮ್ಮ ಅಧಿಕಾರಿಗಳು ಸದಾ ಸಜ್ಜಾಗಿರುತ್ತಾರೆ ಎಂಬುದನ್ನು ಜನತೆಯ ಗಮನಕ್ಕೆ ತರಬಯಸುವೆ ಎಂದು ಮಾಹಿತಿ ನೀಡಿದರು.

ಐಸಿಯು ಬೆಡ್ಡುಗಳ ವ್ಯವಸ್ಥೆ:

ಎಲ್ಲ ಆಸ್ಪತ್ರೆಗಳಲ್ಲಿಯೂ ತುರ್ತು ನಿಗಾ ಘಟಕದಲ್ಲಿ ಬೆಡ್’ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಐಸಿಯುನಲ್ಲಿ ಕೇವಲ 4 ಐಸಿಯು ಹಾಸಿಗೆಗಳನ್ನು ಹೊಂದಿದ್ದ ಕೆಸಿ ಜನರಲ್ ಆಸ್ಪತ್ರೆಯಲ್ಲಿ 100 ಐಸಿಯು ಬೆಡ್’ಗಳನ್ನು ಮಾಡಲಾಗುತ್ತಿದೆ. ಆಸ್ಪತ್ರೆಯ ಒಳಗೆ 50 ಮತ್ತು ಆಸ್ಪತ್ರೆಯ ಹೊರಗೆ 50 ಮಾಡ್ಯೂಲರ್ (ಮೊಬೈಲ್) ಐಸಿಯು ಹಾಸಿಗೆಗಳನ್ನು ಹಾಕಲಾಗುತ್ತಿದೆ. ಈ ಪ್ರಕ್ರಿಯೆ ಈಗಾಗಲೇ ಅಂತಿಮ ಹಂತದಲ್ಲಿದೆ . ಇದರ ಜತೆಗೆ ರಾಜಾಜಿನಗರದ ಇಎಸ್‌ಐನಲ್ಲಿಯೂ 50 ಐಸಿಯು ಬೆಡ್ಡುಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿಸಿಎಂ ವಿವರಿಸಿದರು.

ಇಡೀ ವಿಭಾಗದಲ್ಲಿ ವೈದ್ಯರು, ಅರೆ ವೈದ್ಯ ಸಿಬ್ಬಂದಿ, ನರ್ಸುಗಳು, ಆಂಬುಲೆನ್ಸ್, ಆಂಬುಲೆನ್ಸ್ ಚಾಲಕರು, ಔಷಧಗಳು ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕು. ಕೋವಿಡ್ ಸೋಕಿತರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸದಂತೆ ನೋಡಿಕೊಳ್ಳಬೇಕು. ಈಗಾಗಲೇ ಕೋವಿಡ್ ಕಾರ್ಯಪಡೆಗಳನ್ನು ಸ್ಥಾಪಿಸಲಾಗಿದೆ. ಅವು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಆ ಬಗ್ಗೆ ಗಮನ ಹರಿಸಿ. ಅವುಗಳಲ್ಲಿ ಸೇರ್ಪಡೆಯಾಗಿರುವ ಎಲ್ಲರೂ ಉತ್ತಮವಾಗಿ, ಅರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಡಿಸಿಎಂ ಹೇಳಿದರು.