ಸಿಎಂ ಬದಲಾವಣೆ ಆಗ್ತಾರೆ ಅಂತ ಪ್ರಿಯಾಂಕ್ ಖರ್ಗೆಗೆ ಕನಸು ಬಿದ್ದಿದ್ಯಾ.?- ಸಚಿವ ಎಸ್.ಟಿ ಸೋಮಶೇಖರ್ ಕಿಡಿ.

 

ಮೈಸೂರು,ನವೆಂಬರ್,10,2021(www.justkannada.in): ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ತಲೆದಂಡವಾಗುತ್ತದೆ. ಈ ಪ್ರಕರಣ ಸಿಎಂ ಬಲಿ ಪಡೆಯುತ್ತೆ ಎಂದು ಹೇಳಿಕೆ ನೀಡಿದ್ಧ ಕಾಂಗ್ರೆಸ್ ಶಾಸಕ ಪ್ರಿಯಾಂಕಾ ಖರ್ಗೆ  ವಿರುದ್ಧ ಸಚಿವ ಎಸ್.ಟಿ ಸೋಮಶೇಖರ್ ಕಿಡಿ ಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮುಖ್ಯಮಂತ್ರಿಗಳು ಈ ಬಗ್ಗೆ ದೆಹಲಿಯಲ್ಲಿ ಉತ್ತರ ನೀಡಿದ್ದಾರೆ. ಪ್ರಕರಣ ಸಂಬಂಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ‌. ತನಿಖೆ ಬಳಿಕ ಸತ್ಯಾಂತ ಹೊರಬರುತ್ತೆ. ಇದಕ್ಕೂ ಮುನ್ನವೇ ಸಿಎಂ ಬದಲಾವಣೆ ಆಗ್ತಾರೆ ಅಂತ ಪ್ರಿಯಾಂಕಾ ಖರ್ಗೆಗೆ ಕನಸು ಬಿದ್ದಿದ್ಯಾ? ಎಂದು ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿಯವರು ಅವಧಿಯನ್ನ ಪೂರೈಸುತ್ತಾರೆ. ಈ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ಪ್ರಿಯಾಂಕ ಖರ್ಗೆ ಬೆಳೆದಿಲ್ಲ. ಅವರಪ್ಪ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕರು. ಇವನೊಬ್ಬ ಜೂನಿಯರ್ ಗೆ ಜೂನಿಯರ್. ಇವನ ಹೇಳಿಕೆಗೆ ಪ್ರತಿಕ್ರಿಯೆ ನೀಡೊಕೆ ಹೋಗಲ್ಲ ಎಂದರು.

ವಿಧಾನಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ ವಿಚಾರ ಕುರಿತು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ನಾಳೆ ಅಥವಾ ನಾಳಿದ್ದು ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತದೆ. ಈಗಾಗಲೇ ಪಟ್ಟಿಯನ್ನ ದೆಹಲಿಗೆ ಕಳುಹಿಸಲಾಗಿದೆ‌.ಇದೇ 16ನೇ ತಾರೀಖು ನಾಮಪತ್ರ ಸಲ್ಲಿಕೆ ಇರುವುದರಿಂದ  ಶೀಘ್ರದಲ್ಲೇ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಹೈಕಮಾಂಡ್ ಅಭ್ಯರ್ಥಿಗಳ ಆಯ್ಕೆ ಮಾಡುತ್ತಾರೆ. 25ಕ್ಕೆ 25ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಳೆ ಸ್ನೇಹಿತರು ಒಂದು ಕಡೆ ಸೇರಿದ್ದಾರೆ: ಈ ವೇಳೆ ಹಳೆ ಲವ್ ಹೊರಗೆ ಬಂದಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ.ಟಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಮಾಗಮ ವಿಚಾರ‌ಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಸ್‌.ಟಿ.ಸೋಮಶೇಖರ್ , ಹಳೆ ಸ್ನೇಹಿತರು ಒಂದು ಕಡೆ ಸೇರಿದ್ದಾರೆ. ಈ ವೇಳೆ ಹಳೆ ಲವ್ ಹೊರಗೆ ಬಂದಿದೆ. ಇಬ್ಬರು ಒಂದೇ ವೇದಿಕೆ ಹಂಚಿಕೊಂಡ್ರು ಅಂದ್ರೆ ಜಿಟಿಡಿ ಪಕ್ಷ ಸೇರ್ತಾರೆ ಅಂತಲ್ಲ. ಇಬ್ಬರು ಪರಸ್ಪರ ರಾಜಕೀಯ ಎದುರಾಳಿಗಳು. ವೇದಿಕೆ ಕಾರ್ಯಕ್ರಮದಲ್ಲಿ ಒಂದಾಗಿದ್ದಾರೆ ಅಷ್ಟೇ ಎಂದು ಹೇಳಿದರು.

Key words: CM- changes –bit coin-Priyank kharge- Minister -ST Somashekhar