ಅಪ್ಪು ಸ್ಮರಣಾರ್ಥ ಪ್ರಕಾಶ್ ರಾಜ್ ಫೌಂಡೇಶನ್’ನಿಂದ 5 ಆಸ್ಪತ್ರೆಗಳಿಗೆ ಆಂಬುಲೆನ್ಸ್ ಕೊಡುಗೆ

ಬೆಂಗಳೂರು, ಮಾರ್ಚ್ 26, 2023 (www.justkannada.in): ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ 5 ಆಸ್ಪತ್ರೆಗಳಿಗೆ ಆಂಬುಲೆನ್ಸ್ ಗಳನ್ನು ನೀಡಲಾಗಿದೆ.

ಬೀದರಿನ ಗುರು ನಾನಕ್ ಆಸ್ಪತ್ರೆ, ಕಲಬುರ್ಗಿಯ ಡಾ. ಓಮ್ ಇಂಡೋ ಜರ್ಮನ್ ಆಸ್ಪತ್ರೆ ಚಿತ್ತಾಪುರ, ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಕೊಳ್ಳೇಗಾಲದ ‘ಹೋಲಿ ಕ್ರಾಸ್ ಕಾನ್ವೆಂಟ್ ಆಸ್ಪತ್ರೆ’. ಮತ್ತು ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ಆಂಬುಲೆನ್ಸ್ ಹಸ್ತಾಂತರಿಸಲಾಗಿದೆ.

ಈ ಬಾರಿ ಪ್ರಕಾಶ್ ರಾಜ್ ಫೌಂಡೇಶನ್ ಜತೆಗೆ ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಮೂಲಕ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರು ಕೂಡ ಕೈ ಜೋಡಿಸಿದ್ದಾರೆ. ಜೊತೆಗೆ ತಮಿಳಿನ ಸೋದರ ನಟ ಸೂರ್ಯ ಅವರು ತಮ್ಮ 2 ಡಿ ಎಂಟರ್ಟೈನ್ಮೆಂಟ್ ಮೂಲಕ. ನಮ್ಮ ಕನ್ನಡದ ಹೆಮ್ಮೆಯ ನಾಯಕ ನಟ ಯಶ್ ಅವರು ತಮ್ಮ ಸಂಸ್ಥೆ ‘ಯಶೋಮಾರ್ಗ’ ದ ಮೂಲಕ ಬಹಳ ದೊಡ್ಡ ಸಹಾಯವಾಗಿ ನಿಂತಿದ್ದಾರೆ. ಜೊತೆಗೆ ಅವರ ಸ್ನೇಹಿತ ನಿರ್ಮಾಪಕರಾದ ವೆಂಕಟ್ ಅವರು ತಮ್ಮ ಕೆವಿಎನ್ ಫೌಂಡೇಶನ್ ಮೂಲಕ ಬೆಂಬಲ ನೀಡಿದ್ದಾರೆ.

ತಮ್ಮ ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ ಹಾಗೂ ಉತ್ತಮ ವ್ಯಕ್ತಿತ್ವದಿಂದಾಗಿ ನಮ್ಮೆಲ್ಲರ ನಡುವೆ ಎಂದೆಂದೂ ಮಾಸದ ನೆನಪಾಗಿ ಉಳಿದಿರುವವರು ಡಾ ಪುನೀತ್ ರಾಜಕುಮಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು. ಅವರು ಯಾವಾಗಲೂ ನಮ್ಮ ಜೊತೆ ಇರಬೇಕು ಅಂದರೆ ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರೆಸಿದರೆ ಮಾತ್ರ ಸಾಧ್ಯ ಆಗುತ್ತದೆ. ಈ ಒಂದು ಆಶಯದಿಂದ ಶುರುವಾಗಿದ್ದು ಅಪ್ಪು ಎಕ್ಸ್ ಪ್ರೆಸ್ ಆಂಬುಲೆನ್ಸ್. ಕರ್ನಾಟಕದ ಪ್ರತೀ ಜಿಲ್ಲೆಯಲ್ಲೂ ಅಪ್ಪು ಹೆಸರಿನ ಆಂಬುಲೆನ್ಸ್ ಇರಬೇಕು ಎನ್ನುವುದು ನನ್ನ ಹಾಗೂ ನಮ್ಮ ಕನಸು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.