ಪತ್ನಿ ಮೇಲೆ ಹಲ್ಲೆ ಆರೋಪ: ಹೆಚ್ಚುವರಿ ಪ್ರಾದೇಶಿಕ ಆಯುಕ್ತರ ವಿರುದ್ದ ದೂರು.

ಮೈಸೂರು,ನವೆಂಬರ್,19,2022(www.justkannada.in):  ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ ಆರೋಪದ ಮೇರೆಗೆ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಶಿವರಾಜು ಅವರ ವಿರುದ್ಧ ಆಲನಹಳ್ಳಿ  ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅವರ ಪತ್ನಿ ದಿವ್ಯಾ ದೂರು ನೀಡಿದ್ದಾರೆ.

’10 ವರ್ಷಗಳ ಹಿಂದೆ ಶಿವರಾಜು ಅವರೊಂದಿಗೆ ವಿವಾಹವಾಗಿದ್ದು, ಅತ್ತೆ ಹಾಗೂ ಮೈದುನ ವಿನಾಕಾರಣ ಹೀಯಾಳಿಸಿ, ಕಿರುಕುಳ ನೀಡಿದ್ದರು. ತವರು ಮನೆಯವರೊಂದಿಗೆ ಮಾತನಾಡಬಾರದೆ೦ದು ನಿರ್ಬಂಧ ವಿಧಿಸಿದ್ದರು. ಪರಿಚಿತರೊಂದಿಗೆ ಮಾತನಾಡಿದರೆ, ಸಂಬಂಧ ಕಲ್ಪಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದರು. ಎಂದು ಆರೋಪಿಸಿದ್ದಾರೆ.

ನ.16ರಂದು ಸಹೋದರ ಮನೆಗೆ ಬಂದಾಗ ಅವರೊಂದಿಗೆ ಉಪಹಾರಕ್ಕೆಂದು ಹೊರಗೆ ಹೋಗಿದ್ದಾಗ ತಕ್ಷಣ ಮನೆಗೆ ಬರುವಂತೆ ಪತಿ ತಿಳಿಸಿದ್ದರು. ವಾಪಸ್ಸಾದಾಗ ಅತ್ತೆ ಚಂದ್ರಕಲಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ಮಧ್ಯಪ್ರವೇಶಿಸಿದ ಸಹೋದರ ಎಲ್ಲರನ್ನೂ ಸಮಾಧಾನಪಡಿಸಿ, ರಾತ್ರಿ 8 ಗಂಟೆಗೆ ಹಾಸನಕ್ಕೆ ಹೋದರು.

ಅದಾದ ಸ್ವಲ್ಪ ಹೊತ್ತಿನಲ್ಲಿ ಮೈದುನ ಅಭಿಷೇಕ್ ನನ್ನ ಅಜ್ಜಿಗೆ ಬೈಯುತ್ತಿದ್ದ. ಅದನ್ನು ಪ್ರಶ್ನಿಸಿದಾಗ ನನ್ನ ಮುಂದಲೆ ಹಿಡಿದು ಎಳೆದಾಡಿದ. ಅತ್ತೆ ನನ್ನ ಕಪಾಳಕ್ಕೆ ಹೊಡೆದರು. ನಂತರ ನನ್ನ ಗಂಡ ಕೊಠಡಿಗೆ ಕರೆದೊಯ್ದು ಕಪಾಳ, ಮೈ, ಹೊಟ್ಟೆ, ತುಟಿಗೆ ಹಲ್ಲೆ ನಡೆಸಿದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಕೈ ಕಾಲು ಊದಿಕೊಂಡು ಮರುದಿನ ಜ್ವರ ಬಂದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಂಡ ಬಳಿಕ ದೂರು ನೀಡಿದ್ದೇನೆ” ಎಂದಿದ್ದಾರೆ. ‘ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿ ದೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿದರು.

Key words: assaulting –wife-Complaint –mysore-Additional- Regional -Commissioner.