ಜನಪ್ರತಿನಿಧಿಗಳು, ಐಟಿಬಿಟಿ, ರಾಜೀವ್‌ ಗಾಂಧಿ ವಿವಿಯಿಂದ ಜಿಲ್ಲೆಯ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸ್ವಾಗತಾರ್ಹ-ಸಚಿವ ಡಾ.ಕೆ.‌ಸುಧಾಕರ್

ಚಿಕ್ಕಬಳ್ಳಾಪುರ, ಸೆಪ್ಟಂಬರ್, 12,2020(www.justkannada.in): ಜಿಲ್ಲೆಯ ಸರಕಾರಿ ಶಾಲೆಗಳನ್ನು ಶಾಸಕರು, ಮಂತ್ರಿಗಳು, ಐಟಿ ಬಿಟಿ ಕಂಪನಿಗಳು ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ದತ್ತು ಪಡೆದು ಸರಕಾರಿ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸಲು ಒಪ್ಪಿರುವುದು ಸ್ವಾಗತಾರ್ಹ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.adoption-government-schools-district-itbt-rajiv-gandhi-university-welcome-minister-dr-k-sudhakar

ಜಿಲ್ಲಾ ಪಂಚಾಯತ್‌ , ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಜಿಲ್ಲಾ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ  ಸಚಿವ ಸುಧಾಕರ್ ಮಾತನಾಡಿದರು.

ಪ್ರತಿ ಶಾಸಕರು ಆಯಾ ಜಿಲ್ಲೆಯಲ್ಲಿನ ಮೂರು ಸರಕಾರಿ ಶಾಲೆ ದತ್ತು ಪಡೆಯಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಮಂತ್ರಿಯಾಗಿ ನಾನು ಈಗಾಗಲೇ ಐದು ಶಾಲೆಗಳನ್ನು ಆಯ್ಕೆ ಮಾಡಿದ್ದೇನೆ. ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ 5 ಶಾಲೆಗಳನ್ನು ದತ್ತು‌ಪಡೆಯಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಶಾಸಕರು ಹಾಗೂ ಮಂತ್ರಿಗಳು ಮಾತ್ರವಲ್ಲದೇ ವಿಧಾನಪರಿಷತ್ ಸದಸ್ಯರು ಸಹ ಶಾಲೆಗಳನ್ನು ದತ್ತು ಪಡೆಯಲಿ ಎಂದು ಸಲಹೆ ನೀಡಿದರು.

ಸಮಾಜಕ್ಕೆ ಶಿಕ್ಷಕರ ಕೊಡುಗೆ ಅಸಾಧಾರಣ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 20ನೇ ಸ್ಥಾನದಲ್ಲಿದ್ದ ನಮ್ಮ‌ ಜಿಲ್ಲೆಯನ್ನು ಶಿಕ್ಷಕರ ಶ್ರಮದಿಂದ ಈ ವರ್ಷ ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಲಾಗಿದೆ. ಈ ಸಾಧನೆ ಪ್ರತಿವರ್ಷ ಮರುಕಳಿಸಬೇಕು ಎಂದರು.

ಯಾವುದಾದರೊಂದು ವೃತ್ತಿಗೆ ನಿವೃತ್ತಿ‌ ಇಲ್ಲವೆಂದರೆ ಅದು ಶಿಕ್ಷಕರಿಗೆ. ತಂದೆ ತಾಯಿ ಜನ್ಮ ನೀಡಿದರೆ ಶಿಕ್ಷಕರು ಜೀವನ ನೀಡುತ್ತಾರೆ. ಮಕ್ಕಳ ಸಂಪೂರ್ಣ ವಿಕಾಸ ಶಿಕ್ಷಕರಿಂದ ಮಾತ್ರ ಸಾಧ್ಯ. ಆ ಕಾಲದಿಂದಲೂ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದೆ ಎಂದು ಸುಧಾಕರ್ ಬಣ್ಣಿಸಿದರು.

ಶಿಕ್ಷಕರಾದವರು ಎಂದಿಗೂ ಕಲಿಕೆ ನಿಲ್ಲಿಸಬಾರದು. ಹುಟ್ಟಿನಿಂದ ಸಾವಿನವರೆಗೂ ಕಲಿಕೆ ಬಹಳ ಮುಖ್ಯ. ಪ್ರತಿಯೊಬ್ಬ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಆವಿಷ್ಕಾರವನ್ನು ಮೈಗೂಡಿಸಿಕೊಳ್ಳಬೇಕು. ಪೀಳಿಗೆಗೆ ತಕ್ಕಂತೆ ಶಿಕ್ಷಣದ ಪದ್ಧತಿ ಬದಲಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ಪ್ರೇರಣಾ ಶಕ್ತಿಯಾಗಬೇಕು. ನನ್ನ ಜೀವನದಲ್ಲಿ ಅನೇಕ ಶಿಕ್ಷಕರು ಬಂದು ಹೋದರು, ಆದೆ ಕೆಲವೇ ಶಿಕ್ಷಕರು ನನ್ನ ಮನದಲ್ಲಿ ಗಟ್ಟಿಯಾಗಿ ಉಳಿದಿದ್ದಾರೆ. ಹಾಗೇ ನೀವು ಸಹ, ಪೋಷಕರ ನಂತರ ಮಕ್ಕಳ‌ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ಕಿವಿ‌ಮಾತು ಹೇಳಿದರು.

ದೇಶದಲ್ಲಿ ಜಾತಿ ಪದ್ಧತಿ, ಭ್ರಷ್ಟಾಚಾರ, ಅಜ್ಞಾನ, ಹಸಿವನ್ನು ನೀಗಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಚಿಕ್ಕ ವಯಸ್ಸಲ್ಲೇ ಜಾತಿ ಪದ್ಧತಿ ತೊಲಗಿಸುವ ಜವಾಬ್ದಾರಿ ನಿಮ್ಮದು. ಶಿಕ್ಷಣದಿಂದ ಮಾತ್ರ ದೇಶದ ಹಾಗೂ ವ್ಯಕ್ತಿಯ ವಿಕಾಸ ಅಗತ್ಯ.‌ ಶಿಕ್ಷಣ- ಶಿಕ್ಷಕರು ದೇಶದ ಎರಡು ಕಣ್ಣುಗಳಿದ್ದಂತೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮ‌ ಜವಾಬ್ದಾರಿ ಎಂದರು.

ನನ್ನ ಮೊದಲ ಆದ್ಯತೆ ಜಿಲ್ಲೆಯನ್ನು ವಿಕಾಸ ಮಾಡುವುದು. ಹೊಸ ಜಿಲ್ಲೆಯಾಗಿರುವುದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ‌ ಮಾಡಲು ಸಾಕಷ್ಟು ಅವಕಾಶವಿದೆ. ಈ‌ ನಿಟ್ಟಿನಲ್ಲಿ ಈಗಾಗಲೇ 600 ಕೋಟಿ ವೆಚ್ಚದಲ್ಲಿ 700 ಹಾಸಿಗೆಯ ವೈದ್ಯಕೀಯ ಕಾಲೇಜನ್ನು ನಿರ್ಮಿಸಲಾಗುತ್ತಿದ್ದು, 24  ತಿಂಗಳೊಳಗೆ ಲೋಕಾಪರ್ಣೆಗೊಳ್ಳಲಿದೆ ಎಂದರು.

ಮಾದರಿ ಗುರು ಭವನ ನಿರ್ಮಾಣ:

ಬಹುದಿನಗಳ ನಿರೀಕ್ಷೆಯಂತೆ ಗುರುಭವನ‌ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಬಳಿ ಶಂಕು ಸ್ಥಾಪನೆ ಆಗಿದೆ. ಈ ಭವನವನ್ನು ಇಡೀ ರಾಜ್ಯದಲ್ಲಿ ಮಾದರಿಯಂತೆ ನಿರ್ಮಾಣ ಮಾಡಲಾಗುತ್ತದೆ ಎಂದರು. ಈ ಎಲ್ಲಾ ಅಭಿವೃದ್ಧಿಯಿಂದ ರಾಜ್ಯದಲ್ಲಿ ನಮ್ಮ ಜಿಲ್ಲೆ ಮಾದರಿ ಜಿಲ್ಲೆಯಾಗಿ ಹೊರಹೊಮ್ಮಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.

ಡ್ರಗ್‌ ಮುಕ್ತ ಜಿಲ್ಲೆ:

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತು ಸೇವನೆ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಿದರು.

Key words:  adoption – government schools – district – ITBT -Rajiv Gandhi university-welcome-minister -Dr. K. Sudhakar.