ಮೈಸೂರು: ಬಹಿರ್ದೆಸೆಗೆ ತೆರಳಿದ್ದ  ವಿಧವೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕ…

ಮೈಸೂರು,ಜೂ,18,2019(www.justkannada.in): ಬಹಿರ್ದೆಸೆಗೆ ತೆರಳಿದ  ವಿಧವೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮೈಸೂರು ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಎಡಹಳ್ಳಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಎಡಹಳ್ಳಿ ಗ್ರಾಮದ ನಿವಾಸಿ ನಿಂಗಮ್ಮ ಎಂಬ ವಿಧವೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕ. ಅದೇ ಗ್ರಾಮದ ಯೋಗಾನಂದ ಎಂಬ ಯುವಕನಿಂದಲೇ ದುಷ್ಕ್ರತ್ಯ ನಡೆದಿದೆ.

ಸೋಮವಾರ ಬೆಳಗಿನ ಜಾವ ಮಹಿಳೆ ನಿಂಗಮ್ಮ ಬಹಿರ್ದೆಸೆಗೆಂದು ತೆರಳಿದ್ದ ವೇಳೆ ಹಿಂಬಾಲಿಸಿಕೊಂಡು ಹೋದ ಯುವಕ ಯೋಗಾನಂದ ವಿಧವೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.  ಈ ವೇಳೆ ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆಯ ಮೇಲಿದ್ದ ಬಟ್ಟೆಯನ್ನ ಕಿತ್ತುಹಾಕಿದ್ದಾನೆ. ತದನಂತರ ಈ ವಿಚಾರವನ್ನ ಯಾರಿಗಾದ್ರೂ ಹೇಳಿದ್ರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಘಟನೆ ನಡೆದ ಬಳಿಕ ಸಂತ್ರಸ್ತ ಮಹಿಳೆ  ಯೋಗಾನಂದ ತಂದೆ ಶಿವಪಾದಸ್ವಾಮಿಗೆ ಈ ವಿಷಯ ತಿಳಿಸಿದ್ದಾರೆ. ಆದರೆ ತಂದೆಯು ಕೂಡ ಮಹಿಳೆಯನ್ನ ಅವಾಚ್ಯ ಪದಗಳಿಂದ ನಿಂದಿಸಿ ಗ್ರಾಮದಿಂದ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಗ್ರಾಮದಲ್ಲಿ ನ್ಯಾಯ ದೊರಕದ ಹಿನ್ನಲೆ ನಿಂಗಮ್ಮ ಪೋಲಿಸ್ ಠಾಣೆ ಮೆಟ್ಟಲೇರಿದ್ದು,ನಿಂಗಮ್ಮನ ದೂರಿನ ಮೇರೆಗೆ ಸ್ಥಳ ಪರಿಶೀಲನೆ ಮಾಡಿ ಪೋಲಿಸರು ಎಫ್ ಐ ಆರ್ ದಾಖಲಿಸಿದ್ದಾರೆ. ಯೋಗಾನಂದ ಸೇರಿದಂತೆ ಆತನ ತಂದೆ ಶಿವಪಾದಸ್ವಾಮಿ, ಮತ್ತೊಬ್ಬ ಆತನ ಸಂಬಂಧಿಕ ನಂಜುಂಡಸ್ವಾಮಿ ಮೇಲೆ ಎಫ್ ಐ ಆರ್ ದಾಖಲಾಗಿದೆ. ತನಿಖೆ ಚುರುಕುಗೊಳಿಸಿದ ಪೋಲಿಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

Key words: A young man who tried to rape a woman in Mysore

#youngman  #rape  #woman #Mysore