ವಿದ್ಯಾರ್ಥಿನಿಲಯದ ಪುನರ್ ನಿರ್ಮಾಣಕ್ಕೆ ಸಂಪೂರ್ಣ ಹಣದ ನೆರವು: ಮಾಜಿ ಸಚಿವ ಎಂ.ಆರ್ ಸೀತಾರಾಮ್

ಮೈಸೂರು,ಸೆಪ್ಟಂಬರ್,28,2021(www.justkannada.in):  ಸಮಾಜದ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನಿರ್ಮಿಸಿರುವ ವಿದ್ಯಾರ್ಥಿನಿಲಯದ ಪುನರ್ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ನೆರವನ್ನು ಸಂಪೂರ್ಣವಾಗಿ ಒದಗಿಸಲಾಗುವುದು ಎಂದು ಮಾಜಿ ಸಚಿವ ಎಂ.ಆರ್.ಸೀತಾರಾಮ್ ಭರವಸೆ ನೀಡಿದರು.

ನಗರದ ಸರಸ್ವತಿಪುರಂ ಶ್ರೀಯೋಗಿ ನಾರಾಯಣ ಬಲಿಜ(ಬಣಜಿಗ) ಸಂಘದ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಕಟ್ಟಡದ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಸಮಾಜದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜದ ಮಕ್ಕಳ ಅಭಿವೃದ್ಧಿ,ವಿದ್ಯಾಭ್ಯಾಸಕ್ಕೆ ನಿರ್ಮಿಸಿರುವ ಹಾಸ್ಟೆಲ್‌ಗಳನ್ನು ಖಾಸಗಿಯವರಿಗೆ ಕೊಡದೆ ಸಂಘದಿಂದ ನಿರ್ವಹಣೆ ಮಾಡಬೇಕು. ಬೆಂಗಳೂರಿನಲ್ಲಿ ಇದ್ದ ಹಾಸ್ಟೆಲ್‌ನ್ನು ಖಾಸಗಿಯವರಿಗೆ ವಹಿಸಿಕೊಟ್ಟ ಪರಿಣಾಮವಾಗಿ ಅವರಿಂದ ವಾಪಸ್ ಪಡೆಯಲು ದೊಡ್ಡ ಸಮಸ್ಯೆ ಎದುರಿಸಬೇಕಾಯಿತು. ಈಗ ಸಮಾಜದ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಮೈಸೂರಿನಲ್ಲಿರುವ ವಿದ್ಯಾರ್ಥಿನಿಲಯವನ್ನು ಖಾಸಗಿಯವರಿಗೆ ಕೊಟ್ಟಿದ್ದರಿಂದ ನ್ಯಾಯಾಲಯದ ಮೊರೆ ಹೋಗಬೇಕಾದ ಸನ್ನಿವೇಶ ಬಂದಿದ್ದು ಬೇಸರವಾಗಿತ್ತು. ಈಗ ಇತ್ಯರ್ಥವಾಗಿ ಸಮಾಜಕ್ಕೆ ಬಂದಿರುವುದರಿಂದ ಸಂತೋಷವಾಗಿದೆ. ಕಟ್ಟಡವನ್ನು ಪುನರ್ ನವೀಕರಣ ಮಾಡಿ ನೂರು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವಂತಹ ಕೊಠಡಿಗಳನ್ನು ನಿರ್ಮಾಣ ಮಾಡಲು ಎಲ್ಲ ಖರ್ಚು ಒದಗಿಸಲು ಅನುದಾನ ಕೊಡುತ್ತೇನೆ ಎಂದರು.

ಮುಂದಿನ ಜನವರಿ ಒಳಗೆ ಸಂಪೂರ್ಣ ನವೀಕರಣವಾಗಿ ೧೦೦ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು.ವಿದ್ಯಾರ್ಥಿನಿಲಯದ ನವೀಕರಣಕ್ಕೆ ಬೇಕಾದ ಹಣ ಕೊಡುವುದರಿಂದ ಜನವರಿ ತಿಂಗಳೊಳಗೆ ಮುಗಿಸಬೇಕು. ಸ್ನಾತಕ,ಸ್ನಾತಕೋತ್ತರ ಇಂಜಿನಿಯರಿಂಗ್,ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವಕಾಶ  ಮಾಡಿ ಕೊಡಬೇಕು ಮೈಸೂರು,ಮಂಡ್ಯ,ಚಾಮರಾಜನಗರ,ಹಾಸನ,ಕೊಡಗು ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ನಮ್ಮ ತಂದೆಯವರು ಸಮಾಜದ ಕೊಡುಗೆಯನ್ನು ಮಾಡಬೇಕು. ಸಮಾಜಕ್ಕೆ ಏನಾದರೂ ಸೇವೆ ಮಾಡಿದರೆ ಹಿಂದುಳಿದ ಬಡವರಿಗೆ ನೆರವಾಗಲಿದೆ ಎನ್ನುವ ಮಾತನ್ನು ಹೇಳುತ್ತಿದ್ದರು.ಅದರಂತೆ, ಮೈಸೂರುಭಾಗಕ್ಕೂ ನಮ್ಮ ಸೇವೆ ಸದಾ ಇರುತ್ತದೆ ಎಂದು ನುಡಿದರು.

ಅರಗು ಮತ್ತು ಬಣ್ಣದ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿ,ವಿದ್ಯಾರ್ಥಿನಿಲಯ ದೇವಸ್ಥಾನಕ್ಲಿಂತ ಶ್ರೇಷ್ಠ. ಯಾವುದೇ ಕಲ್ಮಶ ಇಲ್ಲದೆ ವಾತಾವರಣ ನಿರ್ಮಾಣ ಮಾಡಬೇಕು.ಬಡವರು,ಗ್ರಾಮಾಂತರ ಪ್ರದೇಶಗಳಿಂದ ಬರುವವರಿಗೆ ಅನುಕೂಲವಾಗಲೆಂದು ಕಟ್ಟಿಸಿದ ನಿಲಯದ ಅಭಿವೃದ್ಧಿಮಾಡಬೇಕು ಎಂದು ಹೇಳಿದರು.  ಸಂಘದ ಅಧ್ಯಕ್ಷ ಎಂ.ನಾರಾಯಣ, ಪ್ರಧಾನ ಕಾರ್ಯದರ್ಶಿ ಎಚ್ ಆರ್ ಗೋಪಾಲಕೃಷ್ಣ, ಖಜಾಂಚಿ ಡಿ.ನಾಗರಾಜು,   ಮಹಾರಾಣಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ ಎಂ.ಪಿ.ರಾಘವೇಂದ್ರ, ಹಾಜರಿದ್ದರು.

Key words: Former Minister- MR Seetharam – full -financial -assistance – rebuilding – hostel