ಸಾರಿಗೆ ಸಿಬ್ಬಂದಿಗೆ ಲಸಿಕೆ ಆಂದೋಲನಕ್ಕೆ ಡಿಸಿಎಂ ಲಕ್ಷ್ಮಣ್ ಸವದಿ ಚಾಲನೆ.

ಬೆಂಗಳೂರು,ಜೂ,1,2021(www.justkannada.in):  ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಲಾಕ್ ಡೌನ್ ಮುಗಿದ ನಂತರ ಪ್ರಾರಂಭವಾಗುವ ಸಾರಿಗೆ ಸೇವೆಗೆ ಎರಡನೇ ಸುತ್ತಿನ ಕೋವಿಡ್ ಲಸಿಕೆ ಪಡೆದಂತಹ ಚಾಲಕರು ಮತ್ತು ನಿರ್ವಾಹಕರನ್ನೇ ಬಳಸಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ  ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.jk

ಬೆಂಗಳೂರಿನ ಶಾಂತಿನಗರದಲ್ಲಿ ಬಿ.ಎಂ.ಟಿ.ಸಿ ಯ ಸಿಬ್ಬಂದಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಆಂದೋಲನಕ್ಕೆ  ಡಿಸಿಎಂ ಲಕ್ಷ್ಮಣ್ ಸವದಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬಿ.ಎಂ.ಟಿ.ಸಿಯಲ್ಲಿ ಒಟ್ಟು ಸುಮಾರು 31 ಸಾವಿರದಷ್ಟು ಸಿಬ್ಬಂದಿಗಳಿದ್ದು, ಇವರಲ್ಲಿ ಈಗಾಗಲೇ ಸುಮಾರು 19 ಸಾವಿರದಷ್ಟು ಮಂದಿಗೆ ಲಸಿಕೆ ಗಳನ್ನು ಉಚಿತವಾಗಿ ನೀಡಲಾಗಿದೆ. ಉಳಿದವರಿಗೂ ಆದ್ಯತೆ ಮೇರೆಗೆ, ಲಸಿಕೆ ನೀಡಲು ಕ್ರಮ ವಹಿಸಲಾಗಿದೆ.  ಲಾಕ್ ಡೌನ್ ಮುಗಿದ ನಂತರ ಕರ್ತವ್ಯದಲ್ಲಿ ತೊಡಗುವ ಸಿಬ್ಬಂದಿಗಳಿಗೆ ಎರಡು ಸುತ್ತಿನ ಲಸಿಕೆಯನ್ನು ನೀಡಿದ್ದಲ್ಲಿ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದಲೂ ಸುರಕ್ಷಿತವಾಗುತ್ತದೆ ಎಂದು ಸವದಿ ಅವರು ವಿವರಿಸಿದರು.

ನಾಲ್ಕೂ ಸಾರಿಗೆ ನಿಗಮಗಳಲ್ಲಿ ಇದೇ ರೀತಿಯ ಉಚಿತ ಲಸಿಕೆ ನೀಡುವ ಅಭಿಯಾನವನ್ನು ಏರ್ಪಡಿಸಲಾಗುತ್ತಿದೆ. ಇವುಗಳ ಪ್ರಯೋಜನವನ್ನು ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಪಡೆಯಬೇಕೆಂದು ಡಿಸಿಎಂ ಲಕ್ಷ್ಮಣ್ ಸವದಿ ಮನವಿ ಮಾಡಿಕೊಂಡರು.

ತಜ್ಞರ ಸಮಿತಿಯ ವರದಿ  ಆಧರಿಸಿ ಲಾಕ್ ಡೌನ್ ಅವಧಿಯನ್ನು ಎಲ್ಲಿಯವರೆಗೆ ಜಾರಿಯಲ್ಲಿರಬೇಕು ಎಂಬುದನ್ನು ಶೀಘ್ರವೇ ನಿರ್ಧರಿಸಲಾಗುವುದು. ಲಾಕ್ ಡೌನ್ ಅವಧಿಯ ಬಗ್ಗೆ ಸರಕಾರ ಅಂತಿಮವಾಗಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬ ಆಧಾರದ ಮೇಲೆ ಸಾರಿಗೆ ಸಂಸ್ಥೆಗಳ ಸೇವೆಯನ್ನು ಪುನ: ಪ್ರಾರಂಭಿಸಲಾಗುವುದು.  ಆದ್ದರಿಂದ ಸಾರಿಗೆ ಬಸ್ಸುಗಳ ಸಂಚಾರವನ್ನು ಯಾವಾಗ ಪುನರ್ ಪ್ರಾರಂಭಿಸಲಾಗುತ್ತದೆ ಎಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸವದಿ ತಿಳಿಸಿದರು.

ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಿರುವುದರಿಂದ ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವುದು ತುಸು ಸಮಾಧಾನಕರ ಸಂಗತಿ. ಹಾಗಂತ ಯಾರೂ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ ತೋರಬಾರದು ಎಂದು  ಡಿಸಿಎಂ ಲಕ್ಷ್ಮಣ್ ಸವದಿ ಸಲಹೆ ನೀಡಿದರು.

ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ, ಬಿ.ಎಂ.ಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಸಿ. ಶಿಖಾ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Key words: DCM -Laxman Savadi – vaccine -campaign –transport- staff-bangalore