ತಮಿಳುನಾಡಿನಲ್ಲಿ ಉಚಿತ ಸೀರೆ- ಪಂಚೆ ವಿತರಣೆ ವೇಳೆ ನೂಕುನುಗ್ಗಲು: ನಾಲ್ವರು ಮಹಿಳೆಯರ ಸಾವು

ಬೆಂಗಳೂರು, ಫೆಬ್ರವರಿ 05, 2023 (www.justkannada.in): ಉಚಿತವಾಗಿ ಸೀರೆ ಮತ್ತು ಪುರುಷರಿಗೆ ಪಂಚೆ ವಿತರಿಸುವ ಕಾರ್ಯಕ್ರಮದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.

ತಮಿಳುನಾಡಿನ ಜನತೆ ಶ್ರದ್ಧಾ ಭಕ್ತಿಯಿಂದ ಆಚರಿಸುವ ತೈಪೂಸಂ ಹಿನ್ನಲೆಯಲ್ಲಿ ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿಯಲ್ಲಿ ಈ ಅವಘಡ ನಡೆದಿದೆ.

ವ್ಯಕ್ತಿಯೊಬ್ಬರು ಬಡ ಮಹಿಳೆಯರಿಗೆ ಉಚಿತವಾಗಿ ಸೀರೆ ಮತ್ತು ಪುರುಷರಿಗೆ ಪಂಚೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ನಾಲ್ವರು ಮಹಿಳೆಯರು ಸಾವಿಗೀಡಾಗಿದ್ದಾರೆ.

ಉಚಿತ ಸೀರೆ ಮತ್ತು ಪಂಚೆ ವಿತರಿಸುವ ಸಲುವಾಗಿ ಟೋಕನ್ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಪೊಲೀಸರು ಸಹ ಬಂದೋಬಸ್ತಿಗಾಗಿ ಬೀಡು ಬಿಟ್ಟಿದ್ದರು.

ಆದರೆ ನಿರೀಕ್ಷೆಗೂ ಮೀರಿದ ಜನ ಆಗಮಿಸಿದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.