ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗೆ ಶ್ರೀಗಳಿಂದ ಭೂಮಿಪೂಜೆ

ಅಯೋಧ್ಯೆ ಮೇ.29,2023(www.justkannada.in):  ಮೈಸೂರಿನ ಶ್ರೀ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪೀಠಾಧೀಶರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ 81ನೇ ಜನ್ಮದಿನದ ಸಂಭ್ರಮವಾಗಿದ್ದು, ಅಯೋಧ್ಯೆಯಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆಗೆ ಶ್ರೀಗಳು ಭೂಮಿಪೂಜೆ ನೆರವೇರಿಸುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ಸಾಮಾನ್ಯವಾಗಿ ಸ್ವಾಮೀಜಿ ಅವರ ಜನ್ಮದಿನ ಆಚರಣೆಯನ್ನು ಮೈಸೂರಿನ ಅವಧೂತ ದತ್ತಪೀಠದಲ್ಲಿ ಮಾಡಲಾಗುತಿತ್ತು. ಸಹಸ್ರಾರು ಭಕ್ತರು ಆಗಮಿಸಿ ಸ್ವಾಮೀಜಿ ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟು ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಿದ್ದರು. ಈ ಸಂದರ್ಭದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಆಶ್ರಮದ ಆವರಣದಲ್ಲಿರುವ ದೇವಾಲಯಗಳಲ್ಲಿ ದೇವರುಗಳಿಗೆ ವಿಶೇಷ ಪೂಜೆಗಳು ನಡೆಯುತ್ತಿದ್ದವು. ಈ ಬಾರಿ ಸ್ವಾಮೀಜಿಯವರ ಅನುಪಸ್ಥಿತಿಯಲ್ಲಿ ಅವಧೂತ ದತ್ತಪೀಠದಲ್ಲಿ ಶ್ರೀಗಳ ಜನ್ಮದಿನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನೆರೆವೇರಿವೆ.

ಆದರೆ ಈ ಬಾರಿ ಸ್ವಾಮೀಜಿಯವರು ಅಯೋಧ್ಯೆಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದೂ ಅತ್ಯಂತ ಸರಳವಾಗಿ. ಶ್ರೀಗಳಿಗೆ ಈಗ 81ನೇ ಹುಟ್ಟುಹಬ್ಬ ವಿಶೇಷವೆಂದರೆ ಅಯೋಧ್ಯೆಯಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಶಾಖೆ ಪ್ರಾರಂಭವಾಗುತ್ತಿದ್ದು ಶ್ರೀಗಳು ಸ್ವತಹ ಭೂಮಿಪೂಜೆ ನೆರವೇರಿಸಿದರು.

ಬೆಳಗಿನಿಂದಲೇ ಅಲ್ಲಿ ವಿಶೇಷ ಪೂಜಾಕಾರ್ಯಗಳು, ಹೋಮಗಳು ನೆರವೇರಿದ್ವು 8.30 ಗಂಟೆಗೆ ಭೂಮಿ ಪೂಜೆಯನ್ನು ಸ್ವಾಮೀಜಿ ನೆರವೇರಿಸಿದರು. ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಗಣಪತಿ ಸಚ್ಛಿದಾನಂದ ಸ್ವಾಮೀಜಿಯವರು ಅಯೋಧ್ಯೆ ವಿಷ್ಣುವಿನ ಅವತಾರ ಶ್ರೀರಾಮ ಹುಟ್ಟಿದ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.

ಶ್ರೀರಾಮ ಧರ್ಮದಿಂದ ರಾಜ್ಯವಾಳಿ ರಾಮರಾಜ್ಯ ಮಾಡಿದ್ದ ಅಂತಹ ಪುಣ್ಯಭೂಮಿಯಲ್ಲಿ ನಮ್ಮ ಆಶ್ರಮ ಮಾಡುತ್ತಿರುವುದು ಅತ್ಯಂತ ಖುಷಿ ತಂದಿದೆ ಎಂದು ತಿಳಿಸಿದರು.

ಬಹಳಷ್ಟು ಭಕ್ತರು ಭೂಮಿ ಪೂಜೆ ಕಾರ್ಯದಲ್ಲಿ ಹಾಗೂ ನನ್ನ ಹುಟ್ಟುಹಬ್ಬದಲ್ಲಿ ಅಭಿನಂದಿಸಲು ಬರುವುದಾಗಿ ಒತ್ತಡ ಹೇರಿದ್ದರು. ಆದರೆ ನಾನೇ ಈ ಬಾರಿ ಬೇಡ ಎಂದು ಹೇಳಿದ್ದೇನೆ. ಏಕೆಂದರೆ ಬಿಸಿಲು ಬಹಳಷ್ಟು ಕಾಡುತ್ತಿದ್ದು ಭಕ್ತರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಹಾಗೆ ಹೇಳಿದ್ದೇನೆ. ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಗಿದೆ. ಆದರೆ ನಮ್ಮ ಆಶ್ರಮದ ಶಾಖೆ ಇಲ್ಲಿ ಪ್ರಾರಂಭವಾಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

ಇಡೀ ವಿಶ್ವದಲ್ಲಿ ಆರೋಗ್ಯ ಭಾಗ್ಯವನ್ನು ದೇವರು ಕರುಣಿಸಿ ಎಲ್ಲ ಪ್ರಜೆಗಳು ಸುಖ ಸಂತೋಷದಿಂದ ಇರಬೇಕೆಂದು ಪ್ರಾರ್ಥಿಸಿದ್ದೇನೆ. ಲೋಕ ಕಲ್ಯಾಣಾರ್ಥವಾಗಿ ಇಂದು ಪೂಜೆಯನ್ನು ನೆರವೇರಿಸಲಾಗಿದೆ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಈ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಆಶ್ರಮದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯನಂದ ತೀರ್ಥ ಸ್ವಾಮೀಜಿ, ಅಯೋಧ್ಯೆಯ ಸಂಸದ ಲಲ್ಲೂ ಸಿಂಗ್, ಅಯೋಧ್ಯೆಯ ಮಹಾರಾಜ ಬಿಮಲೇಂದ್ರ ಮೋಹನ್ ಪ್ರತಾಪ ಮಿಶ್ರ, ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಕೋಶಾಧಿಕಾರಿ ಸ್ವಾಮಿ ಗೋವಿಂದ ದೇವ್ ಗಿರಿ ಸೇರಿದಂತೆ ಹಲವಾರು ಮತ್ತು ಭಕ್ತರು ಪಾಲ್ಗೊಂಡಿದ್ದರು.

Key words: Bhumi Puja – Sri Ganapati Satchidananda -Ashram branch – Ayodhya