Wednesday, August 12, 2026

BDA Apartments

Home DASARA2024 ಮೈಸೂರು ಅರಮನೆಯಲ್ಲಿ ಆಯುಧ ಪೂಜಾ ಸಂಭ್ರಮ

ಮೈಸೂರು ಅರಮನೆಯಲ್ಲಿ ಆಯುಧ ಪೂಜಾ ಸಂಭ್ರಮ

ಮೈಸೂರು,ಅಕ್ಟೋಬ‍ರ್,11,2024 (www.justkannada.in):  ಇಂದು ನಾಡಿನಾದ್ಯಂತ ಆಯುಧ ಪೂಜೆ ಹಬ್ಬವಾಗಿದ್ದು, ವಿಶ್ವ ವಿಖ್ಯಾತ ಮೈಸೂರು ಅರಮನೆಯಲ್ಲಿ ಆಯುಧ ಪೂಜಾ ಸಂಭ್ರಮ ಮನೆ ಮಾಡಿದೆ.

ಇಂದು ಶರನ್ನವರಾತ್ರಿಯ ಒಂಬತ್ತನೇ ದಿನವಾಗಿದ್ದು  ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿಸಲಾಗುತ್ತಿದೆ.  ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌‌ಆಯುಧ ಪೂಜಾ ಕಾರ್ಯ ನೆರವೇರಿಸುತ್ತಿದ್ದಾರೆ.

ಬೆಳಗ್ಗೆ 6ಕ್ಕೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾ ಹೋಮ ನಡೆಸಲಾಗಿದ್ದು,  ಬೆಳಗ್ಗೆ 6.40ರಿಂದ 7.10ರ ಸಮಯದಲ್ಲಿ ಅರಮನೆ ಕಲ್ಯಾಣ ಮಂಟಪದಿಂದ ಆನೆ ಬಾಗಿಲಿನ ಮೂಲಕ ಆಯುಧಗಳನ್ನ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗುವುದು. ಆಯುಧಗಳನ್ನ ಸ್ವಚ್ಛಗೊಳಿಸಿ 7.30ರಿಂದ 8 ಗಂಟೆಯವರೆಗೆ ಕಲ್ಯಾಣ ಮಂಟಪಕ್ಕೆ ವಾಪಸ್ ತರಲಾಯಿತು. ಬೆಳಗ್ಗೆ 9.05ಕ್ಕೆ ಚಂಡಿಕಾ ಹೋಮ ನೆರವೇರಿಸಲಾಗಿದ್ದು  ಪೂರ್ಣಾಹುತಿ ಆದ ಬಳಿಕ ಮಧ್ಯಾಹ್ನ 12.20ರಿಂದ 12.45ರವರೆಗೆ ಕಲ್ಯಾಣ ಮಂಟಪದಲ್ಲಿ ಯದುವೀರ್‌‌ರಿಂದ ಆಯುಧಗಳಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ.

ಬಳಿಕ ಆನೆ ತೊಟ್ಟಿಯಲ್ಲಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಆನೆ, ಪಲ್ಲಕ್ಕಿ ಹಾಗೂ ರಾಜರು ಬಳಸುವ ದುಬಾರಿ ಬೆಲೆಯ ಕಾರುಗಳಿಗೆ ಪೂಜೆ ಸಲ್ಲಿಕೆ ಸಲ್ಲಿಸಲಾಗುತ್ತದೆ ಅಲ್ಲಿಗೆ ನವರಾತ್ರಿಯ ಒಂಭತ್ತನೇ ದಿನದ ಆಯುಧ ಪೂಜಾ ಕಾರ್ಯ ಪೂರ್ಣವಾಗಲಿದೆ.

ಸಂಜೆ ವೇಳೆ ಯಧುವೀರ್ ರತ್ನಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್‌ ನಡೆಸಲಿದ್ದು, ಬಳಿಕ ಸಿಂಹಾಸನದಲ್ಲಿ ಜೋಡಿಸಲಾದ ಸಿಂಹದ ತಲೆಯ ನಿಮಜ್ಜನ, ನಂತರ ದಫ್ತಾರ್‌ ಪೂಜೆ ನಡೆಯಲಿದೆ.

ಅಂಬಾವಿಲಾಸ ಪೂಜೆ ನಡೆಸಿದ ನಂತರ ಯದುವೀರ್ ದೇವರ ದರ್ಶನ ಪಡೆಯಲಿದ್ದಾರೆ.  ನಂತರ ನವರಾತ್ರಿ ಪೂಜೆ ಸಮಾಪನಗೊಳ್ಳಲಿದೆ.

Key words: Ayudha Pooja, celebration, Mysore Palace.