ಅಯೋಧ್ಯೆ: ಬೆಂಗಳೂರು ಕೈಗಾರಿಕೋದ್ಯಮಿ “ಅಳಿಲು” ಸೇವೆ..!

ಬೆಂಗಳೂರು,ಜನವರಿ,6,2024(www.justkannada.in):  ರಾಮಾಯಣದಲ್ಲಿ ಶ್ರೀ ರಾಮಸೇತು ನಿರ್ಮಾಣದ ವೇಳೆ ಪುಟ್ಟ ಪ್ರಾಣಿ ಅಳಿಲಿನ ಸೇವೆ ಪ್ರಶಂಸನಾರ್ಹ ಮತ್ತು ಗಮನ ಸೆಳೆಯುವಂತಹದ್ದು, ಇದೇ ಒಂದು ವಿಷಯವನ್ನಿಟ್ಟುಕೊಂಡು ಬೆಂಗಳೂರಿನ ಕೈಗಾರಿಕೋದ್ಯಮಿಯೊಬ್ಬರು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯ ನವ ನಿರ್ಮಾಣದ ವೇದಿಕೆಯಲ್ಲಿ ಶಾಶ್ವತವಾಗಿ ವಿರಾಜಮಾನವಾಗಲಿದೆ.

ಬೆಂಗಳೂರಿನ ಪೀಣ್ಯದ ನಾಗಸಂದ್ರ ಮೆಟ್ರೋ ಮುಂಭಾಗದಲ್ಲಿರುವ ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕರಾದ ಸಿ.ಪ್ರಕಾಶ್ ಅವರು ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ 15 ಅಡಿ ಎತ್ತರ ಹಾಗೂ 7.5 ಅಡಿ ಅಗಲ ವಿಸ್ತೀರ್ಣದಲ್ಲಿ ಶ್ರೀರಾಮನ ಸೇವೆ ಎಂದು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ ಅಯೋಧ್ಯೆಯ ಕೇಂದ್ರ ರೈಲ್ವೆ ನಿಲ್ದಾಣ ಆವರಣದ  ಮಧ್ಯೆ  ಭಾಗದಲ್ಲಿ ಅನಾವರಣಗೊಳ್ಳಲಿದೆ.

ಇಂದು ಬೆಳಿಗ್ಗೆ ಬೃಹದಾಕಾರದ ಅಳಿಲು ಪುತ್ಥಳಿಹೊತ್ತ ಟ್ರಕ್ ರಸ್ತೆ ಮಾರ್ಗವಾಗಿ ಅಯೋಧ್ಯೆಯತ್ತ ತೆರಳಿತು.ಇದೇ 11 ನೇ ತಾರೀಖು ಅಯೋಧ್ಯೆಗೆ ತಲುಪಲಿದ್ದು,12 ನೇ ತಾರೀಖು ಅಯೋಧ್ಯೆ ರೈಲ್ವೆ ನಿಲ್ದಾಣ ಆವರಣದಲ್ಲಿ ಅಳಿಲು ಪ್ರತಿಷ್ಠಾಪನೆಗೊಳ್ಳಲಿದೆ. ಪ್ರತಿಷ್ಟಾಪನೆಗೆ ಸಂಬಂಧಿಸಿದಂತೆ ಈಗಾಗಲೇ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆಯಲ್ಲದೆ ಸ್ಥಳವನ್ನೂ ನಿಗದಿ ಪಡಿಸಿದೆ ಎಂದು ಪುತ್ಥಳಿ ನಿರ್ಮಾತೃ ಸಿ.ಪ್ರಕಾಶ್ ವಿವರಿಸಿದರು.

ಸದರಿ ಪುತ್ಥಳಿ ನಿರ್ಮಾಣಕ್ಕೆ ಕಾರ್ಟನ್ ಸ್ಟೀಲ್ ಬಳಸಿದ್ದು ಇದರಲ್ಲಿ ತಾಮ್ರದ ಮಿಶ್ರಣ ಇರುವುದರಿಂದ 100 ವರ್ಷಗಳಾದರೂ ಸಹ ಪುತ್ಥಳಿ ಯಾವುದೇ ರೀತಿಯಲ್ಲೂ ಹಾಳಾಗಲು ಸಾಧ್ಯವಿಲ್ಲ.ಜೊತೆಗೆ ನಿರ್ವಹಣೆಗೆ ಯಾವುದೇ ವೆಚ್ಚ ತಗುಲುವುದಿಲ್ಲ ಎಂದು ಪುತ್ಥಳಿ ನಿರ್ಮಾಣ ಇಂಜಿನಿಯರ್ ಧನುಶ್ರೀ ಹೇಳುತ್ತಾರೆ.

ಅಳಿಲು ಪುತ್ಥಳಿಯ ವಿನ್ಯಾಸಗಾರ ಕಲ್ಯಾಣ್ ರಾಠೋಡ್ ಮಾತನಾಡಿ,ಮೊದಲಿಗೆ ಪುತ್ಥಳಿಯ ಮಾಡೆಲ್ ರೆಡಿ ಮಾಡಿಕೊಂಡು ನಂತರ ಈ ರೀತಿಯ ಪುತ್ಥಳಿ ರೆಡಿ ಮಾಡಲು ಸಾಧ್ಯವಾಯಿತು.ಇದರಲ್ಲಿ ಉದ್ಯಮಿ ಪ್ರಕಾಶ್ ಅವರ ಆಸಕ್ತಿಯಿಂದಾಗಿ ಇಚ್ಛೆ ಸಫಲವಾಯಿತು ಎನ್ನುತ್ತಾರೆ.

ಶ್ರೀರಾಮನ ಜನ್ಮಸ್ಥಳಅಯೋಧ್ಯೆಯಲ್ಲಿ ರಾಮಭಕ್ತ ಹನುಮನ ಜನಭೂಮಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಅಳಿಲು ಸೇವೆ ನಿಜಕ್ಕೂ ಪ್ರಶಂಸನಾರ್ಹವಾಗಿದೆ.

Key words: Ayodhya-Bangalore- industrialist-Squirrel- service.