ಸಿಎಂ ಸಿದ್ದರಾಮಯ್ಯಗೆ ಸೋಷಿಯಲ್ ಮೀಡಿಯಾಲ್ಲಿ ನಿಂದನೆ: ಮೈಸೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರು, ಜುಲೈ 16, 2023 (www.justkannada.in): ತಿ.ನರಸೀಪುರದಲ್ಲಿ ವೇಣು ಗೋಪಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿ ಇನ್ಸ್ಟ ಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಜೀ ಹಿಂದೂ ಎಂಬ ವ್ಯಕ್ತಿ ಇನ್ಸ್ಟ್ ಗ್ರಾಂ ನಲ್ಲಿ ಸಿದ್ದರಾಮಯ್ಯ ವಿರುದ್ಧ ಪೋಸ್ಟ್ ಮಾಡಿದ್ದ. “ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ಎಷ್ಟೊಂದು ಸಲೀಸಾಗಿ ಕೊಲೆ ಮಾಡುತ್ತಾರೆ ನೋಡಿ. ಸಿದ್ರಾಮುಲ್ಲಾ ಖಾನ್ ಸರ್ಕಾರದಲ್ಲಿ ಜಿಹಾದಿಗಳಿಂದ ಹಿಂದೂ ಯುವಕನ ಕೊಲೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ” ಎಂದು ಬರೆದು ಪೋಸ್ಟ್ ಮಾಡಲಾಗಿತ್ತು.

ಇಷ್ಟೇ ಅಲ್ಲದೇ “ನಾವೆಲ್ಲ ಒಗ್ಗಟ್ಟಾಗಿ ನಮ್ಮ ಕಾರ್ಯಕರ್ತರ ಬೆನ್ನಿಗೆ ನಿಲ್ಲಬೇಕಿದೆ. ನಾವೆಲ್ಲರೂ ಸೇರಿ ಸ್ವಯಂ ಪ್ರೇರಿತವಾಗಿ ತಿ.ನರಸೀಪುರದಲ್ಲಿ ಬಂದ್ ಮಾಡೋಣ’ ಎಂದು ಸಿದ್ದರಾಮಯ್ಯ ಕುರಿತು ಕೆಟ್ಟದಾಗಿ ಬರೆದಿದ್ದ ರಾಜೀ ಹಿಂದೂ ಎಂಬ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ಮೈಸೂರು ಸೈಬರ್ ಕ್ರೈಮ್ ಠಾಣೆಗೆ ವರುಣ ಹೋಬಳಿಯ ಮೆಲ್ಲಹಳ್ಳಿ ಗ್ರಾಮದ ರವಿ ಕುಮಾರ್ ಎಂಬುವವರು ದೂರು ನೀಡಿದ್ದರು. ಈ ಸಂಬಂಧ ಮೈಸೂರು ಸೈಬರ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.