ಜನಸೇವಕ ವ್ಯಾಪ್ತಿಗೆ ಆಧಾರ್, ಎಪಿಎಲ್, ವೋಟರ್ ಐಡಿ ನೊಂದಣಿ- ಸಚಿವ ಸುರೇಶ್ ಕುಮಾರ್ …

ಬೆಂಗಳೂರು,ಜೂ,8,2020(www.justkannada.in): ಆಧಾರ್ ನೊಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು, ನೊಂದಣಿ ಸೇವೆಗಳನ್ನು ಸಕಾಲ ಸ್ಕೀಂನ ಜನಸೇವಕ ಯೋಜನೆಯಡಿ ಒದಗಿಸಲು ಸಂಬಂಧಿಸಿದ ಇಲಾಖೆಗಳು ಸಹಮತ ವ್ಯಕ್ತಪಡಿಸಿದ್ದು, ಇಷ್ಟರಲ್ಲಿಯೇ ಈ ಸೇವೆಗಳನ್ನು ಜನಸೇವಕ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದ್ದ ನಾಗರೀಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಜನಸೇವಕ ಯೋಜನೆಯನ್ನು ಪುನರಾರಂಭಗೊಳಿಸುವ ನಿಟ್ಟಿನಲ್ಲಿ ವಿಧಾನಸೌಧದದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಹಾಗೂ ಬೆಂಗಳೂರಿನ ಸಂಬಂಧಿಸಿದ ವಿಧಾನಸಭಾ ಸದಸ್ಯರ ಸಭೆಯಲ್ಲಿ ಮಾತನಾಡಿದ ಸಚಿವ ಸುರೇಶ್ ಕುಮಾರ್,  ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಈ ಯೋಜನೆಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದರು.aadhaar-apl-voter-id-registration-minister-suresh-kumar

ಪ್ರಸ್ತುತ ಜನಸೇವಕ ಯೋಜನೆ ಬೆಂಗಳೂರು ಮಹಾನಗರದ ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಯಲ್ಲಿದ್ದು, ಆದಾಯ, ಜಾತಿ ಪ್ರಮಾಣ ಪತ್ರ, ಹಿರಿಯ ನಾಗರೀಕರ ಪಿಂಚಣಿ ಸೇವೆ, ಕಾರ್ಮಿಕ, ಆರೋಗ್ಯ, ಪೊಲೀಸ್ ಸೇವೆಗಳು ಸೇರಿದಂತೆ 50 ಸೇವೆಗಳನ್ನು ಒದಗಿಸಲಾಗುತಿತ್ತು. ಇನ್ನು ಮುಂದೆ ಈ ವ್ಯಾಪ್ತಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ತೀರಾ ಅಗತ್ಯವಾಗಿರುವ ಆಧಾರ್ ನೊಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು ನೊಂದಣಿ ಸೇವೆಗಳನ್ನು ತರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಆಧಾರ್ ಸಂಖ್ಯೆಯು ಇತ್ತೀಚಿಗೆ ಎಲ್ಲ ವ್ಯವಹಾರಕ್ಕೂ ತೀರಾ ಅಗತ್ಯವಾಗಿರುವುದರಿಂದ ಇಂತಹ ಸ್ಥಿತಿಯಲ್ಲಿ ಹಿರಿಯ ನಾಗರೀಕರು, ಅಸಹಾಯಕರು ಈ ಸೇವೆಗಳನ್ನು ಪಡೆದುಕೊಳ್ಳಲು ಪರದಾಡುವಂತಾಗಿದೆ. ಹಿರಿಯರು ಈ ರೀತಿಯ ಕಷ್ಟಪಡುತ್ತಿರುವುದನ್ನು ಗಣನೆಗೆ ತೆಗೆದುಕೊಂಡು ಆಧಾರ್ ನೊಂದಣಿ ಮತ್ತು ಆಧಾರ್ ಅಪ್ಡೇಟ್ ಮಾಡುವ ಸೇವೆಗಳನ್ನು ಸಹ ಜನಸೇವಕ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಯೋ ವೃದ್ಧರು, ಅಸ್ವಸ್ಥ ವ್ಯಕ್ತಿಗಳು ಸುರಕ್ಷಿತವಾಗಿ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಎಲ್ಲ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಜನಸೇವಕ ಸಿಬ್ಬಂದಿ ನಾಗರೀಕರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವ ಸಲುವಾಗಿ ಜನಸೇವಕ ಸೇವೆಗಳನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಕ್ಷಣದಿಂದಲೇ ಈ ಸೇವೆಗಳ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಯೋಜನೆ ರೂಪಿಸಿ ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಭಾಗದ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಜನಸೇವಕ ಯೋಜನೆ ಪುನರಾರಂಭ ಮತ್ತು ಆಧಾರ್ ನೊಂದಣಿಯಂತಹ ಸೇವೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳಬೇಕೆಂದು ಸುರೇಶ್ ಕುಮಾರ್ ಮನವಿ ಮಾಡಿದರು.

ಸಭೆಯಲ್ಲಿ ವಿಧಾನಸಭಾ ಸದಸ್ಯರಾದ ಸತೀಶ್ ರೆಡ್ಡಿ (ಬೊಮ್ಮನಹಳ್ಳಿ), ಮಂಜುನಾಥ್ (ದಾಸರಹಳ್ಳಿ), ಡಿ.ಪಿ.ಎ.ಆರ್ ಇ-ಆಡಳಿತ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಸಕಾಲ ನಿರ್ದೇಶಕ ರಾಜೀವ್ ಚಾವ್ಲಾ, ಸಕಾಲ ಮಿಷನ್ ನಿರ್ದೇಶಕ-2 ವರಪ್ರಸಾದರಡ್ಡಿ ಮತ್ತಿತರರು ಭಾಗವಹಿಸಿದ್ದರು.

 

Key words: Aadhaar- APL- Voter ID –registration-Minister- Suresh Kumar.