Sunday, August 9, 2026

BDA Apartments

Home Front Page ಶಿರಾಡಿ ಘಾಟ್ ಬಂದ್ ಮಾಡುವುದಿಲ್ಲ: ಸಚಿವ ಸಿ. ಸಿ. ಪಾಟೀಲ್ ಸ್ಪಷ್ಟನೆ.

ಶಿರಾಡಿ ಘಾಟ್ ಬಂದ್ ಮಾಡುವುದಿಲ್ಲ: ಸಚಿವ ಸಿ. ಸಿ. ಪಾಟೀಲ್ ಸ್ಪಷ್ಟನೆ.

ಶಿರಾಡಿಘಾಟ್, ಜುಲೈ,11,2022(www.justkannada.in): ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಶಿರಾಡಿಘಾಟ್ ದುರಸ್ತಿಯ ನಿಮಿತ್ತವಾಗಿ ಈ ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ವಾಹನ ಸಂಚಾರ  ನಿಷೇಧ ಮಾಡುವುದಿಲ್ಲ. ಆದರೆ ರಸ್ತೆ ದುರಸ್ತಿ ಕಾಮಗಾರಿ ಮುಂದುವರಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್  ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಮತ್ತು ಶಿರಾಡಿ ಘಾಟ್ ನಡುವಿನ ಹೆದ್ದಾರಿ ಇತರ ಸೇತುವೆಗಳ ಕಾಮಗಾರಿ  ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಕಲೇಶಪುರ ಹಾಗೂ ಶಿರಾಡಿ ಘಾಟ್ ನಲ್ಲಿ  ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಶಿರಾಡಿಘಾಟ್ ಮೂಲಕ ಪ್ರತಿನಿತ್ಯ ಸರಾಸರಿ 30 ಸಾವಿರ ವಾಹನಗಳು ಸಂಚರಿಸುತ್ತವೆ. ಒಂದು ವೇಳೆ ರಸ್ತೆ ಬಂದ್ ಮಾಡಿದರೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತದೆ. ಆದ್ದರಿಂದ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೊಂದು ಭಾಗದಲ್ಲಿ ದುರಸ್ತಿ ಕಾಮಗಾರಿಗಳಿಗೆ  ಅವಕಾಶ ಮಾಡಿಕೊಡಲಾಗುವುದು, ತೀರಾ ಅನಿವಾರ್ಯವಾದರೆ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು, ಸದ್ಯಕ್ಕಂತೂ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಎಂದು ಸಮಜಾಯಿಷಿ ನೀಡಿದರು.

ಮಳೆ ಮತ್ತಿತರ ನೈಸರ್ಗಿಕ ಪ್ರಕೋಪಗಳಿಂದ ರಸ್ತೆಗಳು ಅಥವಾ ಸೇತುವೆಗಳು ಹಾನಿಗೊಳಗಾದರೆ ದುರಸ್ತಿ ಕಾಮಗಾರಿ ನಡೆಸುವುದಕ್ಕೆ ಯಾವುದೇ ಹಣಕಾಸು ತೊಂದರೆ ಇಲ್ಲ.  ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು ಇಂದು ಸಿ.ಸಿ. ಪಾಟೀಲ್ ವಿವರಿಸಿದರು.

ಸ್ಥಳೀಯ ಶಾಸಕ ಕುಮಾರಸ್ವಾಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ. ಕೃಷ್ಣ ರೆಡ್ಡಿ, ಮತ್ತಿತರ ಅಧಿಕಾರಿಗಳು ಸಚಿವರ ಹೆದ್ದಾರಿ ಪರಿಶೀಲನ ಸಂದರ್ಭದಲ್ಲಿ ಜೊತೆಗಿದ್ದರು.

Key words: Shiradi Ghat -does not- bandh-Minister -C.C.Patil