Thursday, August 13, 2026

BDA Apartments

Home Front Page ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿ ಇವೆ: ಪ್ರಾಮಾಣಿಕವಾಗಿದ್ರೆ ತಡೆಯಾಜ್ಞೆ ರದ್ದುಗೊಳಿಸಿ- ಪ್ರತಾಪ್ ಸಿಂಹ...

ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿ ಇವೆ: ಪ್ರಾಮಾಣಿಕವಾಗಿದ್ರೆ ತಡೆಯಾಜ್ಞೆ ರದ್ದುಗೊಳಿಸಿ- ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್  ಕಿಡಿ.

ಮೈಸೂರು,ಜುಲೈ,1,2022(www.justkannada.in): ನಿಮ್ಮ ರೀತಿ ಸೆಕ್ಸ್ ಸ್ಕ್ಯಾಂಡಲ್ ಸಿಡಿಗೆ ಸ್ಟೇ ತಂದಿಲ್ಲ‌. ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿ ಇವೆ. ಪ್ರಾಮಾಣಿಕವಾಗಿದ್ರೆ ತಡೆಯಾಜ್ಞೆ ರದ್ದುಗೊಳಿಸಿ.ಆ ಮೇಲೆ ನಿಮ್ಮ ಬಂಡವಾಳ ಬಯಲಾಗುತ್ತೆ. ಹೀಗೆ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ನಮ್ಮ ಚರ್ಚೆಗೆ ಪೊಲೀಸರು ಅವಕಾಶ‌ ಕೊಡಬೇಕು. ಪ್ರತಾಪ್ ಸಿಂಹ ರೀತಿ ನಾನು ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿಸಿಕೊಂಡಿಲ್ಲ. ನಿಮ್ಮ ರೀತಿ ಹೆಂಡತಿಯನ್ನ ತಂಗಿ ಎಂದು ಮೂಡಾ ಸೈಟ್ ಪಡೆದಿಲ್ಲ‌. ಮೆಗಾ ಗ್ಯಾಸ್ ಯೋಜನೆಯಡಿ 50 ಕೋಟಿ ಲಂಚ ಪಡೆದಿದ್ದರಿ. ನಿಮ್ಮ ಪಕ್ಷದ ಶಾಸಕರೇ ಇದನ್ನ ಹೇಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಚರ್ಚೆಗೆ ಹಂದಿ ಹೊಡೆಯೋರು ಬೇಡ: ತಿಳುವಳಿಕೆ ಇರುವವರನ್ನು ಕಳುಹಿಸಿ..

ಮೈಸೂರು ಜಿಲ್ಲೆಯಲ್ಲಿ ಕ್ರೆಡಿಟ್ ಜಗಳ ತಾರಕಕ್ಕೇರಿದ್ದು ಬಹಿರಂಗ ಚರ್ಚೆಗೆ ಮತ್ತೆ ದಿನಾಂಕ ನಿಗದಿ ಮಾಡಿ ಮಾತನಾಡಿದ ಎಂ. ಲಕ್ಷ್ಮಣ್, ಪ್ರತಾಪ್ ಸಿಂಹ ನನ್ನನ್ನ ಹಂದಿ, ಕತ್ತೆಗೆ ಹೋಲಿಸಿದ್ದೀರಿ. ಜುಲೈ 5 ರಂದು ಎರಡು ಹಂದಿ ಹಾಗೂ ಎರಡು ಕತ್ತೆಗಳ ಜೊತೆಗೆ ಬರುತ್ತೇವೆ. ಕಾಂಗ್ರೆಸ್ ಕಚೇರಿಯಿಂದ ಸಂಸದರ ಕಚೇರಿವರೆಗೆ ಮೆರವಣಿಗೆ ಬರುತ್ತೇವೆ. ಚರ್ಚೆಗೆ ಹಂದಿ ಹೊಡೆಯೋರು ಬೇಡ. ತಿಳುವಳಿಕೆ ಇರುವವರನ್ನು ಕಳುಹಿಸಿ. ಸಾಯುವವರೆಗೂ ನಾನೇ ಗೆಲ್ಲುತೇನೆ ಎನ್ನುವಂತೆ ನಡೆದುಕೊಳ್ಳುತ್ತೀರಿ. 2023ರಲ್ಲಿ ನೀವು ಹೇಗೆ ಗೆಲ್ಲುತ್ತೀರ ನಾವು ನೋಡುತ್ತೇವೆ ಎಂದು ಸವಾಲು ಹಾಕಿದರು.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹ ಕಾಲೆಳೆದ ಎಂ ಲಕ್ಷ್ಮಣ್, ಮಾಜಿ ಸಿಎಂ ಸಿದ್ದರಾಮಯ್ಯರ ಸಾಧನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯ ವೀಡಿಯೋ ತುಣುಕನ್ನು ಪ್ರದರ್ಶಿಸುವ ಮೂಲಕ ತಿರುಗೇಟು ನೀಡಿದರು.

ಲಕ್ಷ್ಮಣ್ ಅವರ ಜೊತೆ ಚರ್ಚೆ ಮಾಡೋದು ಇವರಿಗೆ ಅವಮಾನವೇ.?- ಶಾಸಕ ಯತೀಂದ್ರ ಸಿದ್ಧರಾಮಯ್ಯ.

ಇದೇ ವೇಳೆ ಮಾತನಾಡಿದ ಶಾಸಕ ಯತೀಂದ್ರ ಸಿದ‍್ಧರಾಮಯ್ಯ, ಸಂಸದ ಪ್ರತಾಪ್ ಸಿಂಹ ಹೇಳಿಕೆಯೇ ಅವರ ಸಂಸ್ಕೃತಿ ತೋರಿಸುತ್ತೆ. ಇವರು ಜನಪ್ರತಿನಿಧಿಯಾಗಿ ಉಳಿಯಲು ಲಾಯಕ್ ಇಲ್ಲ. ಚರ್ಚೆಯಲ್ಲಿ ಭಾಗವಹಿಸದೇ ಪಲಾಯನ ಮಾಡಿದವರು ಪ್ರತಾಪ್ ಸಿಂಹ. ಸಿದ್ದರಾಮಯ್ಯನವರ ಅಭಿವೃದ್ಧಿ ಕೆಲಸಗಳು ರಾಜ್ಯದ ಜನರಿಗೆ ಗೊತ್ತಿದೆ. ಎಂ.ಲಕ್ಷ್ಮಣ್ ನಮ್ಮ ಪಕ್ಷದ ಹಿರಿಯ ವಕ್ತಾರರು. ಅವರ ಜೊತೆ ಚರ್ಚೆ ಮಾಡದೇ ಅವರನ್ನು ಹಂದಿಗೆ ಹೋಲಿಸಿದ್ದಾರೆ. ಅವರ ಪಕ್ಷದ ಕಾರ್ಯಕರ್ತರನ್ನ ಹಂದಿ ಹೊಡೆಯುವವರಿಗೆ ಹೋಲಿಸಿದ್ದಾರೆ. ಲಕ್ಷ್ಮಣ್ ಅವರ ಜೊತೆ ಚರ್ಚೆ ಮಾಡೋದು ಇವರಿಗೆ ಅವಮಾನವೇ.? ಇವರು ಜನಪ್ರತಿನಿಧಿಯೋ ಅಥವಾ ಮಹಾರಾಜರೋ.! ಹೇಡಿಯ ಹಾಗೆ ಪಲಾಯನ ಮಾಡಿದವರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ತಿರುಗೇಟು ನೀಡಿದರು.

Key words: Prathap Simha –KPCC-spokeperson-M. Laxman