Wednesday, August 26, 2026

BDA Apartments

Home Front Page ಐಐಎಸ್ಸಿ ಆವರಣದಲ್ಲಿ ಅತ್ಯಾಧುನಿಕ ಎಐ-ರೋಬೋಟಿಕ್ಸ್ ಪಾರ್ಕ್ ಉದ್ಘಾಟನೆ.

ಐಐಎಸ್ಸಿ ಆವರಣದಲ್ಲಿ ಅತ್ಯಾಧುನಿಕ ಎಐ-ರೋಬೋಟಿಕ್ಸ್ ಪಾರ್ಕ್ ಉದ್ಘಾಟನೆ.

ಬೆಂಗಳೂರು,ಮಾರ್ಚ್,14,2022(www.justkannada.in):  ಗ್ರಾಮೀಣ ಪ್ರದೇಶದ ಯುವಜನರಿಗೆ ಉಜ್ವಲ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ರೋಬೋಟಿಕ್ ತಂತ್ರಜ್ಞಾನ ಪಾರ್ಕ್ ಅನ್ನು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ್ ಅವರು ಸೋಮವಾರ ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಉದ್ಘಾಟಿಸಿದರು.

ಇದಕ್ಕೆ ಪೂರಕವಾಗಿ ಏರ್ಪಡಿಸಲಾಗಿದ್ದ `ಕೃತಕ ಬುದ್ಧಿಮತ್ತೆ ಆಧಾರಿತ ಅರ್ಥವ್ಯವಸ್ಥೆಯು 2030ರ ಹೊತ್ತಿಗೆ 15.7 ಟ್ರಿಲಿಯನ್ ಡಾಲರ್ ಸಾಮರ್ಥ್ಯವುಳ್ಳದ್ದಾಗಿದ್ದು, ದೇಶದ ಈಗಿನ ಜಿಡಿಪಿ ಮೊತ್ತಕ್ಕಿಂತ 6 ಪಟ್ಟು ಹೆಚ್ಚು ಶಕ್ತಿಯನ್ನು ತರಲಿದೆ’ ಎಂದರು. ಈ ಕೇಂದ್ರದ ಸ್ಥಾಪನೆಗೆ `ಎಐ ಫೌಂಡ್ರಿ’ ಕೂಡ ನೆರವು ನೀಡಿದೆ.

ಆರ್ಟ್ ಪಾರ್ಕಿನಲ್ಲಿ ನಡೆಯಲಿರುವ ಸಂಶೋಧನೆಗಳು ಆರೋಗ್ಯಸೇವೆ, ಶಿಕ್ಷಣ, ಸಂಪರ್ಕ, ಮೂಲಸೌಲಭ್ಯ, ಕೃಷಿ, ಚಿಲ್ಲರೆ ವ್ಯಾಪಾರ ಮತ್ತು ಸೈಬರ್ ಸೆಕ್ಯುರಿಟಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಅತ್ಯಾಧುನಿಕ ಕೌಶಲ್ಯಗಳನ್ನು ಪೂರೈಸಲಿದೆ. ಈ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರವು 170 ಕೋಟಿ ರೂ. ಕೊಟ್ಟಿದ್ದು, ರಾಜ್ಯ ಸರಕಾರವು 60 ಕೋಟಿ ರೂ.ಗಳನ್ನು ಬೀಜಧನವಾಗಿ (ಸೀಡ್ ಕ್ಯಾಪಿಟಲ್) ನೀಡಿದೆ ಎಂದು ಅವರು ನುಡಿದರು.

`ಮಾಹಿತಿ ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾಗಿ ಮುನ್ನೆಲೆಗೆ ಬಂದ ಬಿಪಿಒಗಳು ತಮ್ಮ ಬೆಳವಣಿಗೆಯ ತುತ್ತತುದಿಯನ್ನು ಈಗಾಗಲೇ ತಲುಪಿವೆ. ಮುಂಬರುವ ದಿನಗಳೆಲ್ಲ ಕೃತಕ ಬುದ್ಧಿಮತ್ತೆಯನ್ನು ಆಧರಿಸಿರಲಿವೆ. ಇದು ಶಿಕ್ಷಣ ಮತ್ತು ಕೌಶಲ್ಯಗಳ ನಡುವೆ ಇರುವ ಅಂತರವನ್ನು ತೊಡೆದು ಹಾಕಲಿದೆ. ಹೀಗಾಗಿಯೇ, ಆರ್ಟ್ ಪಾರ್ಕ್ ಸ್ಥಾಪನೆಗೆ ರಾಜ್ಯವು ಮುಂದಾಗಿದೆ’ ಎಂದು ಅವರು ಹೇಳಿದರು.

ಕಳೆದ 20 ವರ್ಷಗಳಲ್ಲಿ ತಂತ್ರಜ್ಞಾನವು ಬದುಕನ್ನು ಅಗಾಧವಾಗಿ ಪ್ರಭಾವಿಸಿದೆ. ಡಿಜಿಟಲೀಕರಣವು ಅಗಾಧ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ಆರೋಗ್ಯ ಮತ್ತು ಆರ್ಥಿಕ ಸೇವೆಗಳ ಪೂರೈಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಕರ್ನಾಟಕದಲ್ಲಿರುವ ಸಂಶೋಧನೆ ಮತ್ತು ನಾವೀನ್ಯತೆಯ ಕಾರ್ಯ ಪರಿಸರವು ಎಐ ಮತ್ತು ರೋಬೋಟಿಕ್ಸ್ ಆಧಾರಿತ ಉದ್ದಿಮೆಗಳ ಬೆಳವಣಿಗೆಗೆ ಹೇಳಿ ಮಾಡಿಸಿದಂತಿದ್ದು, ಡೇಟಾ ವಿಜ್ಞಾನವು ಉಜ್ವಲ ಅವಕಾಶಗಳ ಚಿನ್ನದ ಗಣಿಯಂತಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಬಣ್ಣಿಸಿದರು.

ಸಮಾವೇಶವನ್ನು ಉದ್ದೇಶಿಸಿ ವರ್ಚುಯಲ್ ಆಗಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್, `ಗ್ರಾಮೀಣ ಪ್ರದೇಶಗಳಲ್ಲಿ ಹುದುಗಿರುವ ಆರ್ಥಿಕ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿಕೊಂಡರೆ ಭಾರತವು ಜಗತ್ತಿನಲ್ಲಿ ಅಗ್ರಸ್ಥಾನಕ್ಕೆ ಏರಬಹುದು. ಈ ನಿಟ್ಟಿನಲ್ಲಿ ಅಟಲ್ ಇನ್ನೋವೇಶನ್ ಮಿಶನ್ ಮತ್ತು ನವೋದ್ಯಮಗಳೊಂದಿಗೆ ಜತೆಗೂಡಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.

ಐಐಎಸ್ ಸಭಾಂಗಣದಲ್ಲಿ ಇದೇ ಸಂದರ್ಭದಲ್ಲಿ ಐಎ ಮತ್ತು ರೋಬೋಟಿಕ್ಸ್ ಕುರಿತ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಅಲ್ಲಿ ವಿವಿಧ ರೀತಿಯ ರೋಬೊಟ್, ಡ್ರೋಣ್ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ವಸ್ತುಗಳನ್ನು ಸಾಗಿಸಬಲ್ಲ‌ ವಾಕಿಂಗ್ ಡ್ರೋಣ್ ಗಳ ಪ್ರದರ್ಶನ ಕೂಡ ಇದೆ.

ಕಾರ್ಯಕ್ರಮದಲ್ಲಿ ಆರ್ಟ್ ಪಾರ್ಕ್ ಸಿಇಒ ಉಮಾಕಾಂತ್ ಸೋನಿ, ನಿರ್ದೇಶಕ ಪ್ರೊ.ರಂಗರಾಜನ್, ಸಿಐಒ ಶುಭಶಿಶ್ ಬ್ಯಾನರ್ಜಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎಸ್. ಚಂದ್ರಶೇಖರ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಉದ್ಯಮಿ ವಿವೇಕ್ ರಾಘವನ್, ಮೋಹನ್ ದಾಸ್ ಪೈ ಮುಂತಾದವರು ಉಪಸ್ಥಿತರಿದ್ದರು.

Key words: inauguration  AI-Robotics Park – IISC