Sunday, September 6, 2026

BDA Apartments

Home Front Page ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವವರನ್ನು ಬಲಿಹಾಕಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿರುವವರನ್ನು ಬಲಿಹಾಕಲಾಗುವುದು: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ನವೆಂಬರ್ 14: ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಮುಲಾಜಿಲ್ಲದೇ ಬಲಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಮುಲಾಜಿಲ್ಲದೆ ಕ್ರಮಜರುಗಿಸಲಾಗುವುದು. ನಮ್ಮ ಸರ್ಕಾರ ಈ ವಿಚಾರದಲ್ಲಿ ಬಹಳ ಮುಕ್ತವಾಗಿದೆ. ಈ ಪ್ರಕರಣವನ್ನು ಬಯಲಿಗೆಳೆದವರೇ ನಾವು. ತನಿಖೆ ಮಾಡಿದ್ದು, ಇ.ಡಿ ಮತ್ತು ಸಿಬಿಐ ಗೆ ಶಿಫಾರಸ್ಸು ಮಾಡಿದ್ದು ನಮ್ಮ ಸರ್ಕಾರ. ಇ.ಡಿಯಿಂದ ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ಇಂಟರ್ ಪೋಲ್ ಗೂ ಸಹ ವಹಿಸಲಾಗಿದೆ. ಅವರು ಕೋರಿದ ಅಗತ್ಯ ಮಾಹಿತಿಯನ್ನು ಒದಗಿಸಲಾಗಿದೆ ಎಂದರು.

ಮುಖ ಮುಲಾಜಿಲ್ಲದೆ ಕ್ರಮ
ಈ ಪ್ರಕರಣದಲ್ಲಿ ರಾಷ್ಟ್ರಕ್ಕೆ, ರಾಜ್ಯಕ್ಕೆ ಹಾಗೂ ವ್ಯಕ್ತಿಗಳಿಗೆ ಮೋಸವಾಗಿದ್ದರೆ, ಮೋಸಮಾಡಿದವರ ಮೇಲೆ ಮುಖಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಆರೋಪಿಯನ್ನು ಬಿಟ್ಟುಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೇಳಿರುವ ಆರು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 2016 ರಿಂದ ಪ್ರಕರಣಕ್ಕೆ ಕರ್ನಾಟಕದೊಂದಿಗೆ ಸಂಬಂಧ ಇರುವುದಾದರೆ ಅವರ ಸರ್ಕಾರ ತನಿಖೆ ಏಕೆ ಕೈಗೊಳ್ಳಲಿಲ್ಲ.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಹಾಗೂ ಸಚಿವರು ಯಾಕೆ ಗಮನ ಹರಿಸಲಿಲ್ಲ. ಆರೋಪಿ ಶ್ರೀ ಕೃಷ್ಣನನ್ನು ಬಂಧಿಸಿ, ಬಿಟ್ಟು ಕಳುಹಿಸಲಾಯಿತು. ನಿರೀಕ್ಷಣಾ ಜಾಮೀನು ಪಡೆದಾಗಲೂ ವಿಚಾರಣೆಗೆ ಅವಕಾಶವಿತ್ತು. ಮುಕ್ತವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬಿಟ್ಟು ನಮ್ಮನ್ನು ಎಕೆ ಪ್ರಶ್ನಿಸುತ್ತಿದ್ದಾರೆ ಎಂದು ಕೇಳಿದ ಅವರು, ಆರೋಪಿಯನ್ನು ಬಿಟ್ಟುಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದರು.

ಆದ್ದರಿಂದ, ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ಸಾಕ್ಷ್ಯಾಧಾರಗಳನ್ನು ತನಿಖೆ ಮಾಡುತ್ತಿರುವ ಇಡಿ ಗೆ ಒದಗಿಸಲಿ ಕೂಡಲೇ ಕ್ರಮ ಎಂದರು.

ಚಿಂತನೆಯ ದಿವಾಳಿತನ
ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ ಎಂದರೆ ಅದು ಸುರ್ಜೆವಾಲಾ ಅವರ ಚಿಂತನೆಯ ದಿವಾಳಿತನ ಎಂದರು. ರಾಷ್ಟ್ರೀಯ ಪಕ್ಷದ ವಕ್ತಾರರೊಬ್ಬರಿಗೆ ಈ ರೀತಿಯ ಆಧಾರರಹಿತ ಆರೋಪಗಳನ್ನು ಮಾಡುವುದು ಶೋಭಿಸುವುದಿಲ್ಲ. ಸಾಂದರ್ಭಿಕ ಪುರಾವೆಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದರು.

ವಶಪಡಿಸಿಕೊಂಡಿರುವ ಬಿಟ್ ಕಾಯಿನ್ ಬಗ್ಗೆ ಬಹಳ ಗೊಂದಲವಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಆರೋಪಿ ಶ್ರೀ ಕೃಷ್ಣ ತನ್ನ ಖಾತೆ ಎಂದು ಯಾವುದೋ ಎಕ್ಸ್ ಚೇಂಜ್ ಖಾತೆಯನ್ನು ನೀಡಿದ್ದಾನೆ ಎಂದರು.