ಬನ್ನಿ ಬಹಿರಂಗ ಚರ್ಚೆ ಮಾಡೋಣ… ಎಚ್ಡಿಕೆಗೆ ಜಮೀರ್ ಅಹ್ಮದ್ ಬಹಿರಂಗ ಸವಾಲು!

ಬೆಂಗಳೂರು, ಅಕ್ಟೋಬರ್ 17, 2020 (www.justkannada.in):  ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಾಡಿದಷ್ಟು ಕೆಲಸವನ್ನು ಯಾರೂ ಮಾಡಿಲ್ಲ. ಕುಮಾರಸ್ವಾಮಿಯವರೇ ಬಹಿರಂಗ ಚರ್ಚೆಗೆ ಬಂದರೆ ನಾನು ಈ ಬಗ್ಗೆ ಮಾತನಾಡಲು ಸಿದ್ದನಿದ್ದೇನೆ ಎಂದು ಮಾಜಿ ಸಿಎಂ ಎಚ್ಡಿಕೆಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸೇರಿದಂತೆ ಬಹಳ ಮಂದಿ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಇವರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಾಡಿದಷ್ಟು ಕೆಲಸವನ್ನು ಯಾರೂ ಮಾಡಿಲ್ಲ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ಮುಸ್ಲಿಮ್ ಸಮುದಾಯದ ಪರವಾಗಿ ಈಗ ಕಣ್ಣೀರು ಸುರಿಸುತ್ತಿರುವ ಕುಮಾರ ಸ್ವಾಮಿಯವರು ಟಿಪ್ಪು ಜಯಂತಿ ಆಚರಣೆಗೆ ಯಾಕೆ ಬಂದಿಲ್?, ಹಜ್ ಯಾತ್ರೆಯ ಉದ್ಘಾಟನೆಗೆ ಯಾಕೆ ಬಂದಿಲ್ಲ? ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಚರಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರು ಬ್ಯಾಂಕ್ವೆಟ್ ಹಾಲ್ ನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡದಂತೆ ಆದೇಶ ಮಾಡಿದ್ದರು ಎಂದು ಕಿಡಿಕಾರಿದ್ದಾರೆ.

ಹಜ್ ಯಾತ್ರೆ ಆರಂಭವಾದ ವರ್ಷದಿಂದ ಇಲ್ಲಿಯ ವರೆಗೆ ಎಲ್ಲಾ ಪಕ್ಷಗಳ ಮುಖ್ಯಮಂತ್ರಿಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಐದೂ ವರ್ಷವೂ ಬಂದಿದ್ದರು. ಆದರೆ ಕುಮಾರಸ್ವಾಮಿಯವರೂ ಒಂದೇ ಒಂದು ಬಾರಿಯೂ ಬಂದಿರಲಿಲ್ಲ. ಯಾಕೆ? ಎಂದಿದ್ದಾರೆ.

a