ಮೈಸೂರು,ಸೆಪ್ಟಂಬರ್,17,2026 (www.justkannada.in): ಗಣೇಶ ಹಬ್ಬದ ವಿಚಾರದಲ್ಲಿ ಯುವಕರಿಗೆ ಧಮ್ಕಿ ಹಾಕಿದ್ದ ಟಿ.ನರಸೀಪುರ ಇನ್ಸ್ ಪೆಕ್ಟರ್ ಧನಂಜಯ್ ಅವರು ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.
ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚಾರದ ಹುಚ್ಚಿನಿಂದ ತಾನೇ ಸ್ಥಳೀಯ ವಾಹಿನಿಯ ಯುವಕನನ್ನು ಠಾಣೆಗೆ ಕರೆಸಿ ವಿಡಿಯೋ ಮಾಡಿಸಿಕೊಂಡಿದ್ದು ಬಹಿರಂಗವಾಗಿದ್ದು ಇದೀಗ ತನ್ನ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡ ಮೇಲೆ ಸ್ಥಳೀಯ ವಾಹಿನಿ ಯುವಕನ ಮೇಲೆ ಎಫ್ ಐಆರ್ ದಾಖಲು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸೆಪ್ಟಂಬರ್ 7 ರಂದು ಠಾಣೆಯಲ್ಲಿ ಶಾಂತಿ ಸಭೆ ಇದೆ ಬಂದು ವರದಿ ಮಾಡಿ ಎಂದು ಠಾಣೆಯಿಂದಲೇ ಕರೆ ಮಾಡಿದ್ದು ಈ ಬಗ್ಗೆ ಟಿ.ನರಸೀಪುರ ಸ್ಥಳೀಯ ವಾಹಿನಿಯ ಯುವಕ ಮಂಜುನಾಥ್ ತನ್ನ ಅಳಲು ತೋಡಿಕೊಂಡಿದ್ದಾರೆ.
ಕೇವಲ ಗಣೇಶ ಹಬ್ಬದ ಶಾಂತಿ ಸಭೆ ಅಲ್ಲ. ಪ್ರತಿಯೊಂದು ಪ್ರಕರಣದಲ್ಲೂ ಪ್ರಚಾರದ ಹುಚ್ಚಿನಿಂದ ಠಾಣೆಗೆ ಕರೆಸಿ ಸುದ್ದಿ ಮಾಡಿಸುತ್ತಿದ್ದರು. ಈ ವಿಚಾರ ವಿವಾದವಾದ ಮೇಲೆ ತಾನು ತಪ್ಪಿಸಿಕೊಳ್ಳಲು ನನ್ನ ಮೇಲೆ ಎಫ್ ಐ ಆರ್ ಮಾಡಿದ್ದಾರೆ. ಅವರ ಹೇಳಿಕೆಯನ್ನು ಸಿಎಂ ಡಿಕೆ ಶಿವಕುಮಾರ್, ಗೃಹಸಚಿವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇನ್ಸ್ ಪೆಕ್ಟರ್ ಮಾತು ಸಮರ್ಥನೆ ಮಾಡಿಕೊಳ್ಳುವಂತಾದರೆ ನಾನು ವಿಡಿಯೋ ಮಾಡಿ ಹಾಕಿದ್ದು ತಪ್ಪಾ? ಅವರ ತಪ್ಪಿಗೆ ನನ್ನ ಮೇಲೆ ಎಫ್ ಐಆರ್ ಹಾಕಿದ್ದಾರೆ . ಅವರು ಹೇಳಿದ್ದನ್ನೇ ನಾನು ವಿಡಿಯೋ ಹಾಕಿರೋದು. ಯಾವುದೇ ವಿಡಿಯೋ ವನ್ನು ತಿರುಚಿಲ್ಲ ಆ ಹೇಳಿಕೆಯನ್ನು ಭಿತ್ತರಿಸಿದ ಮೇಲೆ ಎಫ್ ಐಆರ್ ಏಕೆ? ಜೊತೆಗೆ ಇದು ವಿವಾದವಾದ ಮೇಲೆ ಹಾಕಿದ್ದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ನನ್ನ ಮೇಲೆ ತಪ್ಪು ಹಾಕುತ್ತಿದ್ದಾರೆ. ಸರ್ಕಾರ ಈ ಕೂಡಲೆ ನನ್ನ ಮೇಲಿನ ಎಫ್ ಐಆರ ರದ್ದುಪಡಿಸಬೇಕು ಎಂದು ಸ್ಥಳೀಯ ವಾಹಿನಿಯ ಯುವಕ ಮಂಜುನಾಥ್ ಆಗ್ರಹಿಸಿದ್ದಾರೆ.






