ಮೈಸೂರು,ಫೆಬ್ರವರಿ,14,2026 (www.justkannada.in): ಅವಧೂತ ದತ್ತಪೀಠದ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ಶನಿವಾರ ಶ್ರದ್ಧೆ, ಭಕ್ತಿಭಾವದಿಂದ ನೆರವೇರಿತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಿಕ್ಕಿರಿದು ಸೇರಿದ್ದ 50 ಸಾವಿರಕ್ಕೂ ಹೆಚ್ಚು ಹನುಮ ಭಕ್ತರ ಸಿರಿಕಂಠದಲ್ಲಿ ಹನುಮ ಸ್ಮರಣೆ ದೇಶದ ಧಿಕ್ಕಿಗೂ ಮಾರ್ದನಿಸಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರೊಂದಿಗೆ ಪವಮಾನ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ನಂತರ ವೇದಿಕೆಗೆ ಆಗಮಿಸಿದರು. ಈ ವೇಳೆ ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿ.ಟಿ. ದೇವೇಗೌಡ, ಕೆ. ಹರೀಶ್ಗೌಡ ಹಾಗೂ ನಗರದ ಪ್ರಮುಖ ಗಣ್ಯರು ಸ್ವಾಮೀಜಿ ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕಿ ಎಂಬ ಜೈ ಘೋಷದೊಂದಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಂದರಕಾಂಡದ ಕಥಾ ನಿರೂಪಣೆಯೊಂದಿಗೆ ಸಾಗಿದ ಈ ಪಾರಾಯಣವು ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ನಡೆಯಿತು. ಈ ಅವಧಿಯಲ್ಲಿ ಒಟ್ಟು 18 ಬಾರಿ ಹನುಮಾನ್ ಚಾಲೀಸಾ ಪಠಿಸಲಾಯಿತು.
ಕೇಸರಿಮಯವಾದ ಮೈದಾನ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರ ಕೈಯಲ್ಲಿ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು. ಮೈದಾನದ ತುಂಬೆಲ್ಲಾ ಕೇಸರಿ ವರ್ಣದ ಧ್ವಜ ಕಳೆ ಕಟ್ಟಿದ್ದು, ಹನುಮ ಭಕ್ತರ ಸಾಗರವೇ ಹರಿದುಬಂದಂತಿತ್ತು. ದೇಶ ವಿದೇಶದ ಹಲವು ಮಂದಿ ಹನುಮ ಭಕ್ತರು ಭಗವಧ್ವಜ ಹಿಡಿದು ನೃತ್ಯ ಮಾಡುವ ಮೂಲಕ ಹನುಮಂತನನ್ನು ಆರಾಧಿಸಿದ್ದು ವಿಶೇಷವಾಗಿತ್ತು.
ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಮಂದಿ ಈ ಪಾರಾಯಣ ಮಹಾಯಜ್ಞದಲ್ಲಿ ಭಾಗಿಯಾಗಿದ್ದರು. ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರಗೀತೆ ಹಾಡುವುದರೊಂದಿಗೆ ಮಹಾಯಜ್ಞ ಸಂಪನ್ನಗೊಂಡಿತು.
Key words: Mysore, Shri Hanuman Chalisa Parayana, devotion







