ಮೈಸೂರು, ಸೆಪ್ಟಂಬರ್,15,2025 (www.justkannada.in): ‘ಭವಿಷ್ಯದಲ್ಲಿ ಹೆಚ್ಚಾಗುವ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು, ಎಲ್ಲರಿಗೂ ಚಿಕಿತ್ಸೆ ದೊರಕಿಸಿಕೊಡಲು ಎಲ್ಲಾ ಜಿಲ್ಲೆಗಳಲ್ಲಿಯೂ ಸೆಟಲೈಟ್ ಹೃದ್ರೋಗ ಕೇಂದ್ರ ಆರಂಭಿಸಲಾಗುವುದು’ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದರು.
ಇಲ್ಲಿನ ಸುತ್ತೂರು ಶಾಖಾ ಮಠದಲ್ಲಿ ಭಾನುವಾರ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ.ಬಿ. ದಿನೇಶ್, 2040ರ ವೇಳೆಗೆ ಜನಸಂಖ್ಯೆಯು ಶೇ 15ರಷ್ಟು ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ಸಂಸ್ಥೆಯು ಅಗತ್ಯ ಮೂಲಸೌಕರ್ಯ ವೃದ್ಧಿಸಿಕೊಂಡು ಸೇವೆ ವಿಸ್ತರಿಸಿಕೊಳ್ಳಬೇಕಿದೆ. ಜೊತೆಗೆ, ಪ್ರತಿ ಜಿಲ್ಲೆಗೊಂದು ಸೆಟಲೈಟ್ ಸೆಂಟರ್ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರದಿಂದ ಅನುಮೋದನೆ ಪಡೆದು ಶೀಘ್ರ ಕಾರ್ಯ ರೂಪಕ್ಕೆ ತರಲಾಗುವುದು’ ಎಂದರು.
‘ರಾಜ್ಯದಾದ್ಯಂತ ಪುನೀತ್ ರಾಜ್ ಕುಮಾರ್ ‘ಸ್ಟೆಮಿ’ ಯೋಜನೆ ಜಾರಿಯಲ್ಲಿದೆ. ಇದರಿಂದ ತಾಲ್ಲೂಕು ಹಂತದಲ್ಲಿಯೇ ಹೃದ್ರೋಗಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ‘ಸ್ಟೆಪ್ಟೊಕೈನಸ್’ ಮತ್ತು ‘ಟೆನೆಕ್ಟಿವ್ ಪ್ಲಸ್’ ಎಂಬ ಎರಡು ಚುಚ್ಚುಮದ್ದು ನೀಡುವ ಪ್ರಾಥಮಿಕ ಚಿಕಿತ್ಸೆ ಸಿಗುವಂತೆ ಮಾಡಲಾಗಿದೆ. ಇದರಿಂದ ತಾಲ್ಲೂಕು ಮಟ್ಟದಲ್ಲಿಯೇ ‘ಗೋಲ್ಡನ್ ಅವರ್’ ನಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಇದರಿಂದ ಸಾವಿರಾರು ಹೃದ್ರೋಗಿಗಳ ಜೀವ ಉಳಿದಿದೆ. ಹಾಗಾಗಿ ಈ ಯೋಜನೆಯ ಮತ್ತಷ್ಟು ಬಲವರ್ಧನೆಗೆ ಕ್ರಮ ವಹಿಸಲಾಗುವುದು’ ಎಂದು ಹೇಳಿದರು.
‘ಮೈಸೂರಿನ ಜಯದೇವ ಆಸ್ಪತ್ರೆಗೆ ಐದು ಜಿಲ್ಲೆಗಳಿಂದ ಜನರು ಹೆಚ್ಚಾಗಿ ಬರುತ್ತಿದ್ದಾರೆ. ಅಲ್ಲದೇ ನೆರೆಯ ಕೇರಳ, ತಮಿಳುನಾಡಿನಿಂದಲೂ ರೋಗಿಗಳು ಬರುತ್ತಿದ್ದಾರೆ. ಆದರೆ ಇಲ್ಲಿ ಶೇ 20ರಷ್ಟು ವೈದ್ಯರು, ಶೇ 18ರಷ್ಟು ದಾದಿಯರು, ಶೇ 15ರಷ್ಟು ಗ್ರೂಪ್ ‘ಡಿ’ ಸಿಬ್ಬಂದಿ ಕೊರತೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಆಗ ಒಪಿಡಿ ಸೇವೆ ನೀಡುವಲ್ಲಿ ಆಗುತ್ತಿರುವ ವಿಳಂಬ ತಪ್ಪಲಿದೆ’ ಎಂದು ತಿಳಿಸಿದರು.
ಕೃಪೆ
ಪ್ರಜಾವಾಣಿ
key words: Mysore, suttur Mutt, Satellite Cardiology, Centers, Districts, Dr. B. Dinesh