Thursday, August 13, 2026

BDA Apartments

Home Crime ಆಟವಾಡಲು ಹೋಗಿ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ.

ಆಟವಾಡಲು ಹೋಗಿ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ.

ವಿಜಯಪುರ,ಮೇ,13,2024 (www.justkannada.in): ನಿನ್ನೆ ಆಟವಾಡುವಾಗ ಕಾಣೆಯಾಗಿದ್ದ ಮೂವರು ಮಕ್ಕಳು ಇಂದು ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ಇಂಡಿ ರಸ್ತೆಯಲ್ಲಿರುವ ತ್ಯಾಜ್ಯ ನೀರಿನ ಸಂಸ್ಕರಣ ಘಟಕದಲ್ಲಿ ಮೂವರು ಮಕ್ಕಳ ಶವ ಪತ್ತೆಯಾಗಿದೆ. ಗದಗ ಮೂಲದ ಅನುಷ್ಕಾ ಅನೀಲ ದಹಿಂಡೆ (9) ವಿಜಯ ಅನಿಳ ದಹಿಂಡೆ (7) ಮತ್ತು ವಿಜಯಪುರ ಮೂಲದ ಮಿಹಿರ್ ಶ್ರೀಕಾಂತ ಜಾನಗೌಳಿ (7) ಮೃತಪಟ್ಟ ಮಕ್ಕಳು ಎಂದು ಗುರುತಿಸಲಾಗಿದೆ.

ಗದಗ ಮೂಲದ ಅನುಷ್ಕಾ ಹಾಗೂ ವಿಜಯ್  ಬೇಸಿಗೆ ರಜೆಗಾಗಿ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಒಂಟೆ ಸವಾರಿ ಮಾಡಿದ್ದಾರೆ. ಹೀಗೆ ಆಟವಾಡುತ್ತಿದ್ದ ವೇಳೆ ಮೂವರು ಕಾಣೆಯಾಗಿದ್ದು, ಬಹಳ ಸಮಯವಾದರೂ ಮನೆಗೆ ಮಕ್ಕಳು ಬಾರದ ಕಾರಣ ಮನೆಯವರು ಹುಡುಕಾಡಿದ್ದಾರೆ. ಸಂಜೆ ಎಪಿಎಂಸಿ ಪೊಲೀಸ್ ಠಾಣೆಗೆ ಕುಟುಂಬಸ್ಥರು ದೂರು ನೀಡಿದ್ದು ನಿನ್ನೆಯಿಂದಲೇ ಹುಡುಕಾಟ ನಡೆಸಲಾಗಿತ್ತು.

ಆದರೆ ಇಂದು ಮೂವರು ಮಕ್ಕಳು ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದ ನೀರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Key words: Three children, missing, found, dead