Wednesday, August 12, 2026

BDA Apartments

Home Front Page ಶ್ರೀ ನಂಜುಂಡೇಶ್ವರ ದೇವರ ಹುಂಡಿ ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಿ- ಸರ್ಕಾರಕ್ಕೆ ಹೆಚ್.ಡಿ...

ಶ್ರೀ ನಂಜುಂಡೇಶ್ವರ ದೇವರ ಹುಂಡಿ ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಿ- ಸರ್ಕಾರಕ್ಕೆ ಹೆಚ್.ಡಿ ಕುಮಾರಸ್ವಾಮಿ ಆಗ್ರಹ.

ಬೆಂಗಳೂರು, ಏಪ್ರಿಲ್,4,2023(www.justkannada.in): ನಾಡಿಗೆ ನಾಡೇ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವರ ಹುಂಡಿಗೆ ಬಿಜೆಪಿ ಶಾಸಕ ಬಿ.ಹರ್ಷವರ್ದನ್‌ ಅವರು  ಕೈ ಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಶ್ರೀ ನಂಜುಂಡೇಶ್ವರ ದೇವರ ಹುಂಡಿ ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆ್ಚ್.ಡಿ ಕುಮಾರಸ್ವಾಮಿ, ಸ್ವಯಂ ಘೋಷಿತ ಧರ್ಮೋದ್ಧಾರಕರು, ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ. ದೇವರ ಹುಂಡಿ  ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ನಿಧಿ. ಇವರಿಗೆ ನಾಚಕೆ, ಸಂಕೋಚ ಎನ್ನುವುದು ಕನಿಷ್ಠಕ್ಕಿಂತ ಕಡಿಮೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ.

ನಾಡಿಗೆ ನಾಡೇ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವರ ಹುಂಡಿಗೆ ಬಿಜೆಪಿ ಶಾಸಕ ಬಿ.ಹರ್ಷವರ್ದನ್‌ ಅವರು  ಕೈ ಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ. ಕಮಲಪಕ್ಷ ಮತ್ತೊಮ್ಮೆ ಬೆತ್ತಲಾಗಿದೆ ಎಂದು ಹೆಚ್.ಡಿಕೆ ಕಿಡಿಕಾರಿದ್ದಾರೆ.

ಮುಜರಾಯಿ ದೇವಾಲಯದ ಆದಾಯ ಆಯಾ ದೇಗುಲದ ಅಭಿವೃದ್ಧಿಗೇ ಬಳಸಬೇಕು ಎನ್ನುವುದು ಕಾನೂನು. ರಾಜ್ಯ ಬಿಜೆಪಿ ಸರಕಾರ ಕಾನೂನನ್ನು ಗಾಳಿಗೆ ಬಿಟ್ಟು, 40%ಗಾಗಿ ದೇವರ ದುಡ್ಡನ್ನೇ ನುಂಗಿನೀರು ಕುಡಿದು, ಆ ಹಣವನ್ನೂ ಚುನಾವಣೆಗೆ ಸುರಿಯಲು ಹೊರಟಿದೆ. ಪಾಪದ ಪಕ್ಷಕ್ಕೆ ಪ್ರಾಯಶ್ಚಿತ್ತ ತಪ್ಪದು.. ಶ್ರೀ ನಂಜುಂಡೇಶ್ವರನ ಶಾಪವೂ ತಟ್ಟದೆ ಇರದು.

ಹೇಳುವುದು ಒಂದು, ಮಾಡುವುದು ಇನ್ನೊಂದು. ಧರ್ಮ, ದೇವರು ಎನ್ನುವುದು ಬಿಜೆಪಿಗೆ ಮತಫಸಲು ಕೊಡುವ ಸಾಧನಗಳಷ್ಟೇ. ಶ್ರದ್ಧೆ, ಭಕ್ತಿ ಜನರದ್ದು; ಭುಕ್ತಿ ಮಾತ್ರ ಬಿಜೆಪಿಯದ್ದು. ನೀಚತನದ ಪರಮಾವಧಿ ಇದು. ಸಮುದಾಯ ಭವನಗಳ ನಿರ್ಮಾಣಕ್ಕೆ ದೇವರ ದುಡ್ಡೇ ಬೇಕೆ? ಕೇತ್ರಕ್ಕೆ ಸರಕಾರ ಕೊಟ್ಟ ಹಣ, ಶಾಸಕರ ವಿಶೇಷ ಅನುದಾನ ಇತ್ಯಾದಿಗಳೆಲ್ಲ ಎಲ್ಲಿ ಹೋದವು? ಎಂದು ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಾಜ್ಯ ಬಿಜೆಪಿ ಸರಕಾರವು ಶ್ರೀ ನಂಜುಂಡೇಶ್ವರ ದೇವರ ಹುಂಡಿಯನ್ನು ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಬೇಕು. ಈ ಬಗ್ಗೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ದೇವರ ದುಡ್ಡನ್ನು ದೇವಾಲಯದ ಅಭಿವೃದ್ಧಿಗೇ ಬಳಸಬೇಕು ಎಂದು ಸರ್ಕಾರಕ್ಕೆ ಹೆಚ್.ಡಿಕೆ ಆಗ್ರಹಿಸಿದ್ದಾರೆ.

Key words: HD Kumaraswamy- government – MLA – Shri Nanjundeshwara-tweet