ಸಾವಿನಲ್ಲೂ ಸಾರ್ಥಕತೆ ಮೆರೆದ ಮಾಜಿ ಶಾಸಕ ವಾಸು.

ಮೈಸೂರು,ಮಾರ್ಚ್,9,2024(www.justkannada.in): ಇಂದು ನಿಧನರಾದ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಶಾಸಕ ವಾಸು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹೌದು, ವಾಸು ಅವರು ಮೈಸೂರಿನ  ಜೆಎಸ್‌ಎಸ್ ಆಸ್ಪತ್ರೆಗೆ ದೇಹದಾನ ಮಾಡಿದ್ದಾರೆ. 15 ವರ್ಷದ ಹಿಂದೆಯೇ ದೇಹದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.  ಇನ್ನು ಸಾರ್ವಜನಿಕರ ದರ್ಶನಕ್ಕೆ ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನ ಬಳಿಕ ಜೆಎಸ್ಎಸ್ ಮೆಡಿಕಲ್ ಕಾಲೇಜಿಗೆ ದೇಹ ಹಸ್ತಾಂತರ ಮಾಡಲಾಗುತ್ತದೆ.

ಮಾಜಿ ಶಾಸಕ ವಾಸು ನಿಧನ ಹಿನ್ನೆಲೆ,  ನೆಚ್ಚಿನ ನಾಯಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಮೈಸೂರಿನ ರೇಡಿಯೆಂಟ್ ಆಸ್ಪತ್ರೆಯತ್ತ ಧಾವಿಸಿದ್ದು, ಆಸ್ಪತ್ರೆ ಮುಂಭಾಗ ಪುತ್ರರು , ಸೊಸೆಯಂದಿರು ಕಣ್ಣೀರು ಹಾಕಿದ್ದಾರೆ.

ರೆಡಿಯೆಂಟ್ ಆಸ್ಪತ್ರೆಗೆ ಶಾಸಕ ಜಿ.ಟಿ ದೇವಗೌಡ ಭೇಟಿ ನೀಡಿ ವಾಸು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾವು ಅವರು ಬೇರೆ ಬೇರೆ ಪಕ್ಷದಲ್ಲಿದ್ರೂ ಕೂಡ ನಮ್ಮ ಅವರ ಸಂಬಂಧ ಉತ್ತಮವಾಗಿತ್ತು. ವಾಸು ಶಿಕ್ಷಣ ಪ್ರೇಮಿ, ಶಿಕ್ಷಣ ಕ್ಷೇತ್ರವನ್ನ ಕಟ್ಟಿದ್ದಾರೆ, ಬೆಳೆಸಿದ್ದಾರೆ. ವಾಸು ನಿಧನ ನಮಗೆ ತುಂಬಾ ನೋವುಂಟು ಮಾಡಿದೆ. ವಾಸುರವರ ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ತಿಳಿಸಿದ್ದಾರೆ.

ರೇಡಿಯೆಂಟ್ ಆಸ್ಪತ್ರೆಗೆ ಶಾಸಕ ಕೆ ಹರೀಶ್ ಗೌಡ ಅವರು ಭೇಟಿ ನೀಡಿ ಸಂತಾಪ ಸೂಚಿಸಿದ್ದು, ವಾಸುರವರು ನಮ್ಮ ಮೈಸೂರಿನ ಹಿರಿಯ ರಾಜಕಾರಣಿ. ಇವರ ಸಾವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಒಳ್ಳೆಯ ರಾಜಕಾರಣಿಯನ್ನ ನಾವಿಂದು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ.

Key words: Vasu-former MLA-successful – death