Thursday, July 30, 2026

BDA Apartments

Home Crime ಧರ್ಮಸ್ಥಳ ಕೇಸ್: ವಸಂತ ಗಿಳಿಯಾರ್ ವಿರುದ್ಧ FIR ದಾಖಲು‌

ಧರ್ಮಸ್ಥಳ ಕೇಸ್: ವಸಂತ ಗಿಳಿಯಾರ್ ವಿರುದ್ಧ FIR ದಾಖಲು‌

 ಮೈಸೂರು,ಸೆಪ್ಟಂಬರ್,5,2025 (www.justkannada.in): ಸುಳ್ಳು ಆರೋಪ,  ಧಾರ್ಮಿಕ‌ ಭಾವನೆಗಳನ್ನ ಪ್ರಚೋದಿಸಿ ಜನರನ್ನ ಕೆಣಕುವಂತೆ ಮಾಡಿ, ನನ್ನ ಜೀವ ಭದ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ  ವಸಂತ ಗಿಳಿಯಾರ್ ವಿರುದ್ದ ಒಡನಾಡಿ ಸೇವಾಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ‌ ದೂರು ನೀಡಿದ್ದು ಈ ಕುರಿತು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ‌ ಎಫ್‌ಐ ಆರ್ ದಾಖಲಾಗಿದೆ.

ಧರ್ಮಸ್ಥಳವನ್ನ ಹಂದಿ‌ ಹೊಡೆದಂತೆ ಹೊಡೆಯಬೇಕೆಂದು ಹೇಳಿಕೆ, ಹಿಂದು‌ ಧರ್ಮ ಹಾಗೂ ದೇವಸ್ಥಾನವನ್ನು ಹೊಡೆಯಲು ಬಂದಿದ್ದಾನೆ ಎಂದು ಜಾಲತಾಣಗಳು, ಮಾಧ್ಯಮಗಳು, ಸಭೆಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಸುಳ್ಳು ಸುದ್ದಿಗಳನ್ನ ಹರಡುವ ಮೂಲಕ ಕೋಮುದ್ವೇಷ ಉಂಟು ಮಾಡುತ್ತಿದ್ದಾರೆ. ಸಮಾಜದ ಒಂದು‌ ಭಾಗವನ್ನು ಎತ್ತಿಕಟ್ಟುತ್ತಿದ್ದಾರೆ, ಧಾರ್ಮಿಕ‌ ಭಾವನೆಗಳನ್ನ ಪ್ರಚೋದಿಸಿ ಜನರನ್ನ ಕೆಣಕುವಂತೆ ಮಾಡಿದ್ದು, ನನ್ನ ಜೀವ ಭದ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸ್ಟ್ಯಾನ್ಲಿ ಅವರು 196(1) A , 353(2) ಬಿಎನ್ ಎಸ್ ( ಭಾರತೀಯ ನಾಗರೀಕ‌ಸುರಕ್ಷ ಸಂಹಿತೆ)2023 ಅಡಿ ವಸಂತ ಗಿಳಿಯಾರ್ ವಿರುದ್ದ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ, ವಸಂತ ಗಿಳಿಯಾರ್‌ಗೆ ಪಾಠ ಕಲಿಸಬೇಕು ಅಂತ ದೂರು ದಾಖಲಿಸಿರುವೆ. ಪದೇ ಪದೇ ಆತ ಸುಳ್ಳು ಹೇಳುತ್ತಿದ್ದಾನೆ. ಧರ್ಮದಂಗಲ್ ನಡೆಸಲು ಕಾರಣನಾಗುತ್ತಿದ್ದಾನೆ. ಅವನಿಗೆ ಬುದ್ಧಿ ಬರಬೇಕು ಅಂತ ಎಫ್‌ಐಆರ್ ಮಾಡಿಸಿರುವೆ. ನನ್ನ ವಿರುದ್ಧ ಹಲವು ಬಾರಿ ವೈಯಕ್ತಿಕ ದ್ವೇಷ ಕಾರುತ್ತಿದ್ದಾನೆ. ಜಾಲತಾಣದಲ್ಲಿ ಹೇಳಿಕೆ ತಿರುಚಿ ನನ್ನ ಘನತೆಗೆ ಧಕ್ಕೆ ತಂದಿದ್ದಾನೆ. ಎರಡು‌ ಬಾರಿ‌ ನೋಟಿಸ್ ಕಳಿಸಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಈ‌ ಕಾರಣಕ್ಕೆ ಎಫ್‌ಐ ಆರ್ ದಾಖಲಿಸಿರುವೆ. ಆತನಿಗೆ ಒಳ್ಳೆ ಬುದ್ಧಿ ಬರಲಿ ಅಂತ‌ ಎಫ್‌ ಐ ಆರ್ ಮಾಡಿರುವೆ ಎಂದು ತಿಳಿಸಿದ್ದಾರೆ.

Key words: Odanadi, Stanley, complaint, against, Vasant Gilliyar,  FIR