ಮೈಸೂರಿನಲ್ಲಿ ಅವೈಜ್ಞಾನಿಕ ಸಿಗ್ನಲ್ ನಿಂದ ತೆರಿಗೆ ಹಣ ದುರುಪಯೋಗ : ಗೃಹಸಚಿವರಿಗೆ ಪತ್ರ ಬರೆದ ವಕೀಲ ಅ.ಮ ಭಾಸ್ಕರ್

ಮೈಸೂರು,ಜೂನ್,19,2026 (www.justkannada.in):  ಮೈಸೂರಿನಲ್ಲಿ ಅವೈಜ್ಞಾನಿಕ ಸಿಗ್ನಲ್ ಗಳಿಗೆ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಆಗುತ್ತಿದೆ ಎಂದು ಆರೋಪಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮೈಸೂರಿನ ಹಿರಿಯ ವಕೀಲ ಅ.ಮ ಭಾಸ್ಕರ್ ಪತ್ರ ಬರೆದಿದ್ದಾರೆ.

ಈ ಸಂಬಂಧ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ವಕೀಲ ಅ.ಮ ಭಾಸ್ಕರ್, ನಗರದಾದ್ಯಂತ ಹೊಸದಾಗಿ ಅಳವಡಿಕೆ ಮಾಡಿರುವ ಸಿಗ್ನಲ್ ಗಳಿಗೆ ಬರೋಬ್ಬರಿ 8,25,18,487 (ಎಂಟು ಕೋಟಿ, ಇಪ್ಪತ್ತೈದು ಲಕ್ಷ, ಹದಿನೆಂಟು ಸಾವಿರ ನಾಲ್ಕು ನೂರು ಎಂಬತ್ತೆಳು ರೂ ) ಹಣ ದುರುಪಯೋಗ ಆಗಿದೆ. ನಗರದಲ್ಲಿ IRC ಮಾರ್ಗಸೂಚಿ ಪಾಲನೆ ಮಾಡದೇ ಅವೈಜ್ಞಾನಿಕವಾಗಿ ಸಿಗ್ನಲ್ ಗಳನ್ನ ಅಳವಡಿಕೆ ಮಾಡಲಾಗಿದೆ. ಹೊಸದಾಗಿ ಸಿಗ್ನಲ್ ಗಳನ್ನ ಅಳವಡಿಕೆ ಮಾಡಿ ಟ್ರಾಫಿಕ್ ಕಡಿಮೆ ಆಗಿದೆ ಅಂತಾ ಸಂಬಂಧ ಪಟ್ಟ ಇಲಾಖೆ ಬಿಫೋರ್ ಅಫ್ಟರ್ ಫೋಟೋ ಹಾಕಿ ಪ್ರಚಾರ ಮಾಡುತ್ತಿದೆ. ಆದರೇ ಹೊಸ ಸಿಗ್ನಲ್ ಗಳಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ ಎಂದರು.

RTI ಕಾಯ್ದೆ ಅಡಿಯಲ್ಲಿ ಪಡೆದ ಮಾಹಿತಿ ಪ್ರಕಾರ ಈ ಸಿಗ್ನಲ್ ಗಳು ವೈಜ್ಞಾನಿಕ ಎಂಬ ಬಗ್ಗೆ ಎಲ್ಲಿಯೂ ದಾಖಲೆ ಇಲ್ಲ. ಈ ಯೋಜನೆಯಲ್ಲಿ ಅಧಿಕಾರಿಗಳು ತಮ್ಮ ಅಧಿಕಾರವನ್ನ ದುರುಪಯೋಗ ಮಾಡಿಕೊಂಡಿರುವ ಅನುಮಾನ ಇದೆ. ಕೂಡಲೇ ಈ ವಿಚಾರವಾಗಿ ಉನ್ನತ ಮಟ್ಟದ ಸ್ವತಂತ್ರ ತಾಂತ್ರಿಕ ತನಿಖೆ ನಡೆಸಬೇಕು ಎಂದು ವಕೀಲ  ಅ.ಮ ಭಾಸ್ಕರ್  ಆಗ್ರಹಿಸಿದ್ದಾರೆ.

ಗೃಹಸಚಿವರಿಗೆ ಬರೆದ ಪತ್ರದಲ್ಲೇನಿದೆ..

ಮೈಸೂರು ನಗರದಲ್ಲಿ ರೂ. 8,25,18,487/- (ರೂ. ಎಂಟು ಕೋಟಿ ಇಪ್ಪತ್ತೈದು ಲಕ್ಷ ಹದಿನೆಂಟು ಸಾವಿರ ನಾಲ್ಕು ನೂರು ಎಂಬತ್ತೇಳು ಮಾತ್ರ) ವೆಚ್ಚದ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ATCS) ಯೋಜನೆ ಅನುಷ್ಠಾನದಲ್ಲಿ ಸಾರ್ವಜನಿಕರ ತೆರಿಗೆ ಹಣದ ದುರುಪಯೋಗ ಹಾಗೂ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು ಪಾಲಿಸದೇ ಹಾಗೂ ಯಾವುದೇ ವೈಜ್ಞಾನಿಕ ವರದಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಸಿಗ್ನಲ್‌ ಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ವಕೀಲ ಅ.ಮ ಭಾಸ್ಕರ್ ಒತ್ತಾಯಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳ ಪ್ರಕಾರ ಕೆಳಕಂಡ ಅತ್ಯಂತ ಪ್ರಮುಖ ವೈಜ್ಞಾನಿಕ ಹಾಗೂ ತಾಂತ್ರಿಕ ಅಧ್ಯಯನ ವರದಿಗಳು ಲಭ್ಯವಿಲ್ಲ ಅಥವಾ ಒದಗಿಸಲಾಗಿಲ್ಲ ಎಂದು ತಿಳಿಸಲಾಗಿದೆ.

ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ?

ಟೆಂಡರ್‌ ಷರತ್ತುಗಳ ಪ್ರಕಾರ ಸಿಮ್ಯುಲೇಷನ್ ವರದಿಗಳು, ಟ್ರಾಫಿಕ್ ಆಪ್ಟಿಮೈಸೇಷನ್ ವರದಿಗಳು ಹಾಗೂ ಕಾರ್ಯಕ್ಷಮತೆ ವರದಿಗಳು ಸಲ್ಲಿಸಲ್ಪಟ್ಟಿವೆಯೇ?

ಸಾರ್ವಜನಿಕರಿಗೆ ತೋರಿಸಲಾದ “Before & After” ಪ್ರಚಾರದ ಆಧಾರವೇನು?

ಸಾರ್ವಜನಿಕರ ತೆರಿಗೆ ಹಣವನ್ನು ವೈಜ್ಞಾನಿಕ ಆಧಾರವಿಲ್ಲದೆ ಅಥವಾ ಅಗತ್ಯ ತಾಂತ್ರಿಕ ಅಧ್ಯಯನವಿಲ್ಲದೆ ವೆಚ್ಚ ಮಾಡಲಾಗಿದೆಯೇ? ಯೋಜನೆಯಲ್ಲಿ ಯಾವುದೇ ಅಧಿಕಾರಿಗಳ ನಿರ್ಲಕ್ಷ್ಯ, ಅಕ್ರಮ, ಅಧಿಕಾರ ದುರುಪಯೋಗ ಅಥವಾ ಸಾರ್ವಜನಿಕ ಹಣದ ದುರುಪಯೋಗ ನಡೆದಿದೆಯೇ?

ಆದ್ದರಿಂದ ಈ ವಿಷಯವನ್ನು ಗಂಭೀರ ಸಾರ್ವಜನಿಕ ಹಿತಾಸಕ್ತಿಯ ವಿಷಯವೆಂದು ಪರಿಗಣಿಸಿ, ಹಿರಿಯ ಟ್ರಾಫಿಕ್ ಎಂಜಿನಿಯರಿಂಗ್ ತಜ್ಞರು, ಭಾರತೀಯ ರಸ್ತೆ ಕಾಂಗ್ರೆಸ್ (IRC) ತಜ್ಞರು ಹಾಗೂ ಸ್ವತಂತ್ರ ತನಿಖಾ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯ ಮೂಲಕ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಅ.ಮ ಭಾಸ್ಕರ್ ಮನವಿ ಮಾಡಿದ್ದಾರೆ.

Key words: Misuse, tax money, due, unscientific signal, Mysore, Lawyer, A.M. Bhaskar