ನಂಜನಗೂಡು: ಮಹಿಳೆ-ಆಕೆ ಸ್ನೇಹಿತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದವರ ಬಂಧನ

ಮೈಸೂರು, ನವೆಂಬರ್ 2021 (www.justkannada.in): ತಾಲ್ಲೂಕಿನ ಹೆಮ್ಮರಗಾಲದಲ್ಲಿ ಅಕ್ರಮ ಸಂಬಂಧ ಆರೋಪದಡಿ ಕಳೆದ ಗುರುವಾರ ರಾತ್ರಿ ಮಹಿಳೆ ಹಾಗೂ ಆಕೆಯ ಸ್ನೇಹಿತನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಥಳಿತಕ್ಕೊಳಗಾಗಿದ್ದ ಮಹಿಳೆಯ ಪತಿ ಹಾಗೂ ಮೈದುನನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ರವಿ ಹಾಗೂ ಮೈದುನ ಚಂದ್ರ ಬಂಧಿತರು.

ಕೊಡಗಿನ ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪರಿಚಯವಾಗಿದ್ದ ನೇರಳೆ ಗ್ರಾಮದ ವಿಷ್ಣುನನ್ನು ನ.25ರಂದು ನೋಡಿದೆ. ಮನೆಗೆ ಕರೆದಿದ್ದರಿಂದ ಟೀ ಕುಡಿಯಲು ಬಂದಿದ್ದರು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ಪತಿ ರವಿ ಹಾಗೂ ಮೈದುನ ಚಂದ್ರ ಇಬ್ಬರ ಮೇಲೂ ದೈಹಿಕ ಹಲ್ಲೆ ನಡೆಸಿದ್ದಲ್ಲದೇ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದರು ಎಂದು ಹಲ್ಲೆಗೊಳಗಾಗಿದ್ದ ಮಹಿಳೆ ದೂರಿದ್ದಾರೆ.

ತಡರಾತ್ರಿ ಕಂಬದಿಂದ ಬಿಡಿಸಿ ಸಿದ್ದಪ್ಪಾಜಿ ದೇಗುಲದಲ್ಲಿ ಕೂಡಿಹಾಕಿದ್ದರು. ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮಹಿಳೆ ದೂರಿನಲ್ಲಿ ಆಗ್ರಹಿಸಿದ್ದಾರೆ. ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.