ರಿವರ್ಸ್ ಅಪರೇಷನ್ ಮಾಡೋದಾದ್ರೆ ಮಾಡಿಕೊಳ್ಳಲಿ- ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಬಿಎಸ್ ಯಡಿಯೂರಪ್ಪ..

ಬೆಂಗಳೂರು, ಜು.2,2019(www.justkannada.in); ಕಾಂಗ್ರೆಸ್ ನವರು ರಿವರ್ಸ್ ಆಪರೇಷನ್ ಮಾಡುವುದಾದರೇ ಮಾಡಿಕೊಳ್ಳಲಿ. ನಮ್ಮ ಶಾಸಕರು ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ನಮ್ಮ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುವುದಾದರೆ ಸೆಳೆದುಕೊಳ್ಳಲಿ. ನಾವಂತೂ ಬೇರೆ ಪಕ್ಷದ ಯಾರೊಬ್ಬರನ್ನೂ ಸಂಪರ್ಕ ಮಾಡಿಲ್ಲ. ರಿವರ್ಸ್ ಆಪರೇಷನ್ ಮಾಡುವುದಾದರೆ ಮಾಡಲಿ. ನಾವೇನು ಅವರನ್ನು ತಡೆದಿದ್ದೇವೆಯೇ ಎಂದು  ಕಿಡಿಕಾರಿದರು.

ಕಳೆದ ಮೂರು ತಿಂಗಳಿನಿಂದ ಬಿಜೆಪಿ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ಪಕ್ಷದ  ನಾಯಕರು ಹೇಳುತ್ತಲೇ ಇದ್ದಾರೆ. ಆದರೆ ನಮ್ಮ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಬರುವುದಿಲ್ಲ. ಇನ್ನು ಸಮ್ಮಿಶ್ರ ಸರ್ಕಾರದ ವಿರುದ್ದ  ಅಧಿವೇಶನದಲ್ಲಿ ವಿಶ್ವಾಸಮತಯಾಚನೆ ಪ್ರಶ್ನೆಯೇ ಇಲ್ಲ ಎಂದರು.

Key words: reverse -operation -BS Yeddyurappa -challenges –Congress- leaders