ಬಿಜೆಪಿಗೆ ಮರಳುವ ಮಾತೇ ಇಲ್ಲ, ಈಶ್ವರಪ್ಪ ಹೇಳಿಕೆ ಶುದ್ಧ ಸುಳ್ಳು: ಜಗದೀಶ್ ಶೆಟ್ಟರ್ ಸ್ಪಷ್ಟನೆ

ಬೆಂಗಳೂರು, ಡಿಸೆಂಬರ್ 02, 2023 (www.justkannada.in): ನಾನು ಬಿಜೆಪಿಗೆ ಹೋಗಲ್ಲ. ಬೇರೆಯವರು ಕಾಂಗ್ರೆಸ್‌ಗೆ ಬರಬಾರದು ಎಂದು ನಾನು ಬಿಜೆಪಿಗೆ ವಾಪಸ್‌ ಬರುತ್ತಿದ್ದೇನೆ ಎಂದು ಬಿಂಬಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ ಎಸ್‌ ಈಶ್ವರಪ್ಪ ಅವರು ಮತ್ತೆ ಬಿಜೆಪಿ ಜಗದೀಶ್‌ ಶೆಟ್ಟರ್‌ ಬರುತ್ತಾರೆ ಎಂದು ಹೇಳಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಹೇಳಿಕೆ ಹಸಿಯಾದ ಸುಳ್ಳು. ನಾನು ಮರಳಿ ಬಿಜೆಪಿಗೆ ಹೋಗುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ನನಗೆ ಮತ್ತು ಲಕ್ಷ್ಮಣ ಸವದಿಯವರಿಗೆ ಟಿಕೆಟ್ ತಪ್ಪಿಸಿದ ಪರಿಣಾಮವನ್ನು ಬಿಜೆಪಿಗೆ ಜನ ತೋರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಇದು ಮುಂದುವರಿಯಲಿದೆ. ಬಿಜೆಪಿಯವರು ಕಾಂಗ್ರೆಸ್‌ಗೆ ಹೋಗದಂತೆ ತಡೆಯಲು ನನ್ನ ಹೆಸರು ಬಳಕೆ ಮಾಡುತ್ತಿದ್ದಾರೆ ಎಂದು ಶೆಟ್ಟರ್ ಟೀಕಿಸಿದ್ದಾರೆ.

ಜಗದೀಶ್‌ ಶೆಟ್ಟರ್ ಅವರೇ ಬಿಜೆಪಿಗೆ ವಾಪಸ್ ಬಂದು ಬಿಡ್ತಾರೆ. ನೀವು ಕಾಂಗ್ರೆಸ್‌ಗೆ ಹೋಗಬೇಡಿ ಎಂದು ಬಿಜೆಪಿ ನಾಯಕರಿಗೆ ಹೇಳುತ್ತಿದ್ದಾರೆ. ಆದರೆ ನಾನು ಮರಳಿ ಬಿಜೆಪಿಗೆ ಹೋಗುವ ಮಾತೇ ಇಲ್ಲ ಎಂದು ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.