ಮೈಸೂರು, ಜುಲೈ,20,2026 (www.justkannada.in): ಭಾರತದ ಪ್ರಮುಖ ಅಗರಬತ್ತಿ ತಯಾರಕ ಸಂಸ್ಥೆ ಹಾಗೂ ಮೈಸೂರು ವಾರಿಯರ್ಸ್ ಫ್ರಾಂಚೈಸಿಯ ಮಾಲೀಕರಾದ ಎನ್ಆರ್ ಗ್ರೂಪ್, ಮಹಾರಾಣಿ ಟ್ರೋಫಿ ಕೆಎಸ್ಸಿಎ ಟಿ20 ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಗೆ ಮೈಸೂರು ವಾರಿಯರ್ಸ್ ಮಹಿಳಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಮುಂಬರುವ ಸರಣಿಗಾಗಿ ತಂಡ ಹಾಗೂ ನಾಯಕಿಯನ್ನು ಘೋಷಿಸಿದ್ದು, ರಾಜ್ಯದ ಪ್ರತಿಭಾವಂತ ಆಟಗಾರ್ತಿ ಶುಭಾ ಸತೀಶ್ ಗೆ ನಾಯಕತ್ವ ಹೊಣೆ ನೀಡಲಾಗಿದೆ.
ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಮೈಸೂರು ವಾರಿಯರ್ಸ್, ಈ ಬಾರಿ ಮತ್ತಷ್ಟು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫ್ರಾಂಚೈಸಿಯು ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದೊಂದಿಗಿನ ತನ್ನ ಪಾಲುದಾರಿಕೆಯನ್ನು ಮುಂದುವರಿಸಿದೆ.
ಭಾರತ ತಂಡದ ಮಾಜಿ ಆಟಗಾರ್ತಿ ಕರುಣಾ ಜೈನ್ ಮುಖ್ಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ತಂಡವು ಕಠಿಣ ತರಬೇತಿಯಲ್ಲಿ ನಿರತವಾಗಿದೆ.
ಭಾರತದ ಮಹಿಳಾ ಅಂಧರ ಕ್ರಿಕೆಟ್ ತಂಡದ ವಿಶ್ವಕಪ್ ವಿಜೇತ ನಾಯಕಿ ಹಾಗೂ ರಂಗರಾವ್ ಸ್ಮಾರಕ ವಿಶೇಷಚೇತನರ ಶಾಲೆಯ (ಆರ್ ಎಂ ಎಸ್ ಡಿ) ಹಳೆಯ ವಿದ್ಯಾರ್ಥಿನಿಯಾದ ದೀಪಿಕಾ ಟಿ.ಸಿ. ಅವರು ಮೈಸೂರು ವಾರಿಯರ್ಸ್ ತಂಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮುಂಬರುವ ಸರಣಿಗೆ ಶುಭ ಹಾರೈಸಿದರು. ಅವರ ಉಪಸ್ಥಿತಿಯು ಒಳಗೊಳ್ಳುವಿಕೆ ಹಾಗೂ ಎಲ್ಲಾ ರೀತಿಯ ಸಾಮರ್ಥ್ಯವುಳ್ಳ ಕ್ರೀಡಾಪಟುಗಳಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಫ್ರಾಂಚೈಸಿಯ ನಿರಂತರ ಬದ್ಧತೆಯನ್ನು ಎತ್ತಿಹಿಡಿಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದೀಪಿಕಾ, “ಮೈಸೂರು ವಾರಿಯರ್ಸ್ ನಂತಹ ಫ್ರಾಂಚೈಸಿಗಳ ಪ್ರೋತ್ಸಾಹ ಮತ್ತು ಬೆಂಬಲವು ಮಹಿಳಾ ಕ್ರಿಕೆಟ್ ನ ಬೆಳವಣಿಗೆಗೆ ಅತ್ಯಂತ ಅಮೂಲ್ಯವಾಗಿದ್ದು, ಇದು ಅನೇಕ ಯುವತಿಯರು ದೊಡ್ಡ ಕನಸು ಕಾಣಲು ಪ್ರೇರೇಪಿಸುತ್ತದೆ. ರಂಗರಾವ್ ಸ್ಮಾರಕ ವಿಶೇಷಚೇತನರ ಶಾಲೆಯ ಮೂಲಕ ನನಗೆ ಕ್ರಿಕೆಟ್ ಮುಂದುವರಿಸಲು ಅವಕಾಶ ಮಾಡಿಕೊಟ್ಟ ರಂಗ ಕುಟುಂಬಕ್ಕೆ ನಾನು ಕೃತಜ್ಞಳಾಗಿದ್ದೇನೆ. ಆ ವೇದಿಕೆಯು ನನಗೆ ನೀಡಿದ ಆತ್ಮವಿಶ್ವಾಸ, ತರಬೇತಿ ಮತ್ತು ಪ್ರೋತ್ಸಾಹದಿಂದಾಗಿ ಇಂದು ನಾನು ಈ ಮಟ್ಟಕ್ಕೆ ತಲುಪಲು ಸಾಧ್ಯವಾಗಿದೆ. ನನ್ನ ಮೇಲಿಟ್ಟ ನಂಬಿಕೆಗೆ ನಾನು ಸದಾ ಋಣಿಯಾಗಿರುತ್ತೇನೆ” ಎಂದರು.
ಮೈಸೂರು ವಾರಿಯರ್ಸ್ ಮಾಲೀಕರು ಹಾಗೂ ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕಅರ್ಜುನ್ ರಂಗ ಮಾತನಾಡಿ, “ಮೈಸೂರು ವಾರಿಯರ್ಸ್ ನ ಉದ್ದೇಶ ಕೇವಲ ಸ್ಪರ್ಧಿಸುವುದಷ್ಟೇ ಅಲ್ಲ, ಪ್ರತಿಭಾವಂತ ಮಹಿಳಾ ಕ್ರಿಕೆಟಿಗರಿಗೆ ವೃತ್ತಿಪರ ವೇದಿಕೆಯಲ್ಲಿ ಮಿಂಚಲು ಅವಕಾಶಗಳನ್ನು ಸೃಷ್ಟಿಸುವುದಾಗಿದೆ. ಮೊದಲ ಸೀಸನ್ ಗೆ ಸಿಕ್ಕ ಪ್ರತಿಕ್ರಿಯೆ ನಮಗೆ ಪ್ರೋತ್ಸಾಹ ನೀಡಿದ್ದು, ಈ ವರ್ಷದ ತಂಡವು ಮತ್ತಷ್ಟು ಯುವತಿಯರು ಕ್ರಿಕೆಟ್ ಕಡೆಗೆ ಆಕರ್ಷಿತರಾಗಲು ಪ್ರೇರಣೆಯಾಗಲಿದೆ ಎಂಬ ವಿಶ್ವಾಸವಿದೆ” ಎಂದು ಆಟಗಾರರಿಗೆ ಶುಭ ಹಾರೈಸಿದರು.
ತಂಡದ ನಾಯಕಿ ಶುಭಾ ಸತೀಶ್ ಮಾತನಾಡಿ, “ಈ ಬಾರಿ ನಾವು ಸಂಪೂರ್ಣವಾಗಿ ಸಜ್ಜಾಗಿದ್ದು, ಕಪ್ ಗೆಲ್ಲಲು ಕಠಿಣ ತರಬೇತಿ ಪಡೆದಿದ್ದೇವೆ. ಪ್ರತಿಯೊಬ್ಬ ಆಟಗಾರ್ತಿಯೂ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಬದ್ಧರಾಗಿದ್ದು, ನಾವು ಭಯವಿಲ್ಲದ ಪಾಸಿಟಿವ್ ಕ್ರಿಕೆಟ್ ಆಡಲಿದ್ದೇವೆ. ಮಹಿಳಾ ಕ್ರಿಕೆಟ್ ಮೇಲಿಟ್ಟ ನಂಬಿಕೆಗಾಗಿ ಮ್ಯಾನೇಜ್ ಮೆಂಟ್ ಗೆ ಧನ್ಯವಾದಗಳು. ಈ ಬಾರಿ ಮೈಸೂರಿಗೆ ಟ್ರೋಫಿ ತರುವುದೇ ನಮ್ಮ ಏಕೈಕ ಗುರಿ” ಎಂದರು.
ಮುಖ್ಯ ತರಬೇತುದಾರರಾದ ಕರುಣಾ ಜೈನ್ ಮಾತನಾಡಿ, “ತಂಡವು ಅತ್ಯುತ್ತಮವಾಗಿ ಸಿದ್ಧವಾಗಿದೆ. ಪ್ರತಿಯೊಬ್ಬ ಆಟಗಾರ್ತಿಯೂ ತರಬೇತಿ ಶಿಬಿರದಲ್ಲಿ ಕಠಿಣ ಶ್ರಮ ವಹಿಸಿದ್ದಾರೆ. ಅನುಭವಿ ಹಾಗೂ ಯುವ ಆಟಗಾರ್ತಿಯರ ಸಮತೋಲನ ನಮ್ಮ ತಂಡದಲ್ಲಿದೆ. ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿ, ಪಾಸಿಟಿವ್ ಕ್ರಿಕೆಟ್ ಆಡುವ ಭರವಸೆ ನಮಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟಿ-20 ಮಹಾರಾಣಿ ಟ್ರೋಫಿ 2026 ಟೂರ್ನಿಯಲ್ಲಿ ಈ ಬಾರಿ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಮೈಸೂರು ಸೇರಿದಂತೆ ಒಟ್ಟು ನಾಲ್ಕು ಫ್ರಾಂಚೈಸಿಗಳು ಕಣಕ್ಕಿಳಿಯಲಿವೆ. ಈ ಟೂರ್ನಿಯ ಪಂದ್ಯಗಳು ಜುಲೈ 22 ರಿಂದ ಆಗಸ್ಟ್ 2, 2026ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಮೈಸೂರು ವಾರಿಯರ್ಸ್, ಮೈಸೂರಿನ ಕೆರಗಳ್ಳಿಯಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ (ಕೆಜಿಬಿವಿ) ಜೊತೆಗಿನ ತನ್ನ ಪಾಲುದಾರಿಕೆಯನ್ನು ಮುಂದುವರಿಸಿದೆ. ಕಳೆದ ವರ್ಷದ ಉದ್ಘಾಟನಾ ಮಹಾರಾಣಿ ಟ್ರೋಫಿಯ ನಂತರ, ಫ್ರಾಂಚೈಸಿಯು ಶಾಲೆಗೆ ಕ್ರಿಕೆಟ್ ಪರಿಕರಗಳು, ಕ್ರೀಡಾ ಸಮಸ್ತ್ರಗಳು ಮತ್ತು ಡ್ರಮ್ ಸೆಟ್ ಗಳನ್ನು ನೀಡುವ ಮೂಲಕ ವಿದ್ಯಾರ್ಥಿನಿಯರು ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆತ್ಮವಿಶ್ವಾಸದಿಂದ ಪಾಲ್ಗೊಳ್ಳಲು ನೆರವಾಗಿದೆ. ಈ ಬಾರಿಯೂ ಸಂಸ್ಥೆಗೆ ತನ್ನ ಬೆಂಬಲವನ್ನು ಮುಂದುವರಿಸುವುದಾಗಿ ಮೈಸೂರು ವಾರಿಯರ್ಸ್ ಘೋಷಿಸಿದೆ.
ಇದರೊಂದಿಗೆ, ಕ್ರಿಕೆಟ್ ಮೂಲಕ ಸಮಾಜಕ್ಕೆ ಮರಳಿ ಕೊಡುಗೆ ನೀಡುವ ತನ್ನ ತತ್ವದ ಭಾಗವಾಗಿ, ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯು ತನ್ನ ಸಾಮಾಜಿಕ ಯೋಜನೆಗಳಿಗಾಗಿ ಒಟ್ಟು 3 ಲಕ್ಷ ರೂ. ಮೌಲ್ಯದ ಚೆಕ್ ಗಳನ್ನು ವಿತರಿಸಿತು. ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ-20 2026ರ ಅವಧಿಯಲ್ಲಿ ಭರವಸೆ ನೀಡಿದಂತೆ, ಉಷಾ ಕಿರಣ್ ಕಣ್ಣಿನ ಆಸ್ಪತ್ರೆ ಮತ್ತು ಎಬಿಲಿಟಿ ಸ್ಪೋರ್ಟ್ಸ್ ಲೀಗ್ (ಎಎಸ್ಎಲ್) ಕ್ರಿಕೆಟ್ ಸಂಸ್ಥೆಗೆ ತಲಾ 1.5 ಲಕ್ಷ ರೂ. ಮೌಲ್ಯದ ಚೆಕ್ ಗಳನ್ನು ಹಸ್ತಾಂತರಿಸಲಾಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಆಟಗಾರ್ತಿಯರು, ಪ್ರಾಯೋಜಕರು ಹಾಗೂ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
Key words: T20 Maharani Trophy, ‘Mysore Warriors, women’s, team, announced





